ಅಣ್ಣಿಗೇರಿ: ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಯೂರಿಯಾ ರಸಗೊಬ್ಬರ ಮಾರಾಟ ಮಾಡಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ಟಾಸ್ಕ್ಪೋರ್ಸ್ ತಂಡದ ಅಧಿಕಾರಿಗಳು ರಸಗೊಬ್ಬರ ಮಾರಾಟಗಾರರಿಗೆ ಸೂಚಿಸಿದರು.
ತಹಶೀಲ್ದಾರ್ ಮಂಜುನಾಥ ದಾಸಪ್ಪನವರ ನೇತೃತ್ವದ ತಂಡ ಪಟ್ಟಣದ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಎಚ್ಚರಿಕೆ ನೀಡಿದರು.
ಸರ್ಕಾರ ಯೂರಿಯಾ ಗೊಬ್ಬರವನ್ನು ಸಬ್ಸಿಡಿ ರೂಪದಲ್ಲಿ ರೈತರಿಗೆ ₹266 ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ ಇಲ್ಲಿನ ಕೆಲ ಮಾರಾಟಗಾರರು ಪ್ರತಿ ಯೂರಿಯಾ ಪ್ಯಾಕೇಟ್ ಬೆಲೆಗಿಂತ ₹80 ರಿಂದ ₹100ರಷ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ರೈತರು ದೂರು ನೀಡಿದ್ದರು.
‘ಯೂರಿಯಾ ಗೊಬ್ಬರವನ್ನು ಖರೀದಿಸಿದರೆ ಅದರ ಜೊತೆ ಬೇರೆ ತರಹದ ರಸಗೊಬ್ಬರವನ್ನು ಖರೀದಿ ಮಾಡಬೇಕು ಎಂದು ಅಂಗಡಿ ಮಾಲೀಕರು ರೈತರಿಗೆ ಸೂಚನೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಯಾರೂ ಮಾಡಬಾರದು’ ಎಂದು ಎಚ್ಚರಿಸಿದರು.
ರಸಗೊಬ್ಬರ ಮಾರಾಟದಲ್ಲಿ ನಿಯಮ ಉಲ್ಲಂಘಿಸಬಾರದು. ರೈತರಿಗೆ ಗೊಬ್ಬರದ ರಸೀದಿ ನೀಡಬೇಕು. ದರಪಟ್ಟಿ ಹಾಕಬೇಕು. ಲಿಂಕ್ ಗೊಬ್ಬರ ಖರೀದಿಸುವಂತೆ ಒತ್ತಾಯಿಸಬಾರದು. ಈ ನಿಯಮಗಳನ್ನು ಉಲ್ಲಂಘಿಸಿದರೆ ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಇಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ಎಸ್.ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.