ಹುಬ್ಬಳ್ಳಿ: ನಗರದಲ್ಲಿ ಶುಕ್ರವಾರ ಮಧ್ಯರಾತ್ರಿ ಸುರಿದ ಅಬ್ಬರದ ಮಳೆಗೆ ವಿಜಯನಗರ ಮುಖ್ಯ ರಸ್ತೆಯ ಚಂದ್ರನಾಥ ನಗರದ (ಲಕ್ಷ್ಮೇಶ್ವರ ಚಾಳ) ನಾಲ್ಕೈದು ಮನೆಗಳಿಗೆ ಒಳಚರಂಡಿಯ ನೀರು ನುಗ್ಗಿದೆ. ಇದರಿಂದ ಅಲ್ಲಿನ ಜನ ಶನಿವಾರ ಬೆಳಿಗ್ಗೆಯ ತನಕ ಮನೆಯೊಳಗಿನ ನೀರು ಹೊರಹಾಕಲು ಹರಸಾಹಸ ಪಟ್ಟರು.
ವಿಜಯ ಹೋಟೆಲ್ ಸಮೀಪದಲ್ಲಿ ಒಳಚರಂಡಿ ನಿರ್ಮಾಣ ಮತ್ತು ದುರಸ್ತಿ ಕಾರ್ಯ ನಡೆಯುತ್ತಿದೆ. ದಿಢೀರನೆ ಸಾಕಷ್ಟು ಮಳೆ ಸುರಿದ ಕಾರಣ ಒಳಚರಂಡಿಯ ನೀರೆಲ್ಲ ಮನೆಗಳಿಗೆ ನುಗ್ಗಿತು. ತೆಗ್ಗಿನಲ್ಲಿರುವ ಚಾಳದ ಮನೆಗಳಿಗೆ ವೇಗವಾಗಿ ನೀರು ಹರಿದು ಬಂತು. ಅಲ್ಲಿನ ನಿವಾಸಿಗಳ ಮನೆಯ ಸಾಮಗ್ರಿಗಳಲ್ಲೆವು ನೀರಿನಲ್ಲಿ ನಿಂತಿದ್ದ ಚಿತ್ರಣ ಕಂಡುಬಂತು.
‘ಜೋರಾಗಿ ಮಳೆ ಬಂದು ಒಳಚರಂಡಿಯ ನೀರು ಮನೆಗೆಲ್ಲ ನುಗ್ಗಿದ್ದರಿಂದ ನಾಲ್ಕೈದು ಕುಟುಂಬಗಳ ಸದಸ್ಯರು ರಾತ್ರಿಪೂರ್ತಿ ಜಾಗರಣೆ ಮಾಡಬೇಕಾಯಿತು. ಜೋರಾಗಿ ಮಳೆ ಬಂದಾಗಲೆಲ್ಲ ಈ ಸಮಸ್ಯೆಯಾಗುತ್ತಿದೆ. ಒಳಚರಂಡಿ ಕಾರ್ಯವನ್ನು ಪಾಲಿಕೆ ಅಧಿಕಾರಿಗಳು ಮಾಡುತ್ತಿದ್ದಾರೆ. ಆದರೆ, ವೇಗವಾಗಿ ಕೆಲಸ ಮುಗಿಸಿದ್ದರೆ ನಮಗೆ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ’ ಎಂದು ಲಕ್ಷ್ಮೇಶ್ವರ ಚಾಳದ ನಿವಾಸಿ ರಿಯಾಜ್ ಅಹ್ಮದ್ ನದಾಫ್ ಹೇಳಿದರು.
ಸಂಚಾರ ಪರದಾಟ: ಶನಿವಾರ ಬೆಳಿಗ್ಗೆ ಮತ್ತು ಸಂಜೆ ಸುರಿದ ಮಳೆಗೆ ದ್ವಿಚಕ್ರ ವಾಹನಗಳ ಸವಾರರು ಪರದಾಡಿದರು. ಮಳೆಗಾಲಕ್ಕೂ ಮೊದಲೆ ದುರಸ್ತಿಗೆ ಕಾದಿರುವ ಗುಂಡಿ ಬಿದ್ದ ರಸ್ತೆಗಳಲ್ಲಿ ಪಾದಚಾರಿಗಳು ಮತ್ತು ಸವಾರರು ಹೈರಾಣಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.