ADVERTISEMENT

ರೈಲ್ವೆ ಹಳಿ ಮೇಲೆ ನೀರು: ಮಾರ್ಗ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 19:07 IST
Last Updated 8 ಆಗಸ್ಟ್ 2019, 19:07 IST
ಗೋಕಾಕ್–ಪಾಶ್ಚಾಪುರ ಬಳಿ ರೈಲಿನ ಹಳಿ ಮೇಲೆ ಮಾರ್ಕಂಡೇಯ ನದಿ ನೀರು ಹರಿದ ಕ್ಷಣ
ಗೋಕಾಕ್–ಪಾಶ್ಚಾಪುರ ಬಳಿ ರೈಲಿನ ಹಳಿ ಮೇಲೆ ಮಾರ್ಕಂಡೇಯ ನದಿ ನೀರು ಹರಿದ ಕ್ಷಣ   

ಹುಬ್ಬಳ್ಳಿ: ಗೋಕಾಕ್–ಪಾಶ್ಚಾಪುರ ಬಳಿ ರೈಲಿನ ಹಳಿ ಮೇಲೆ ಮಾರ್ಕಂಡೇಯ ನದಿ ನೀರು ಹರಿದ ಕಾರಣ ಲೋಕಮಾನ್ಯ ತಿಲಕ್‌–ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲನ್ನು ಪುಣೆಯಿಂದ ಸೊಲ್ಲಾಪುರ, ಹೂಟಗಿ, ಗದಗ ಮಾರ್ಗಕ್ಕೆ ಬದಲಾವಣೆ ಮಾಡಲಾಯಿತು.

ಲೋಂಡಾ–ಮೀರಜ್‌ ಮೂಲಕ ಸಾಗಬೇಕಿದ್ದ ಸಂಪರ್ಕಕ್ರಾಂತಿ ಮತ್ತು ವಾಸ್ಕೊ–ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲನ್ನು ಗದಗ–ಹೂಟಗಿ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಯಿತು.

ಬೆಳಗಾವಿ–ದೇಸೂರು ಪ್ಯಾಸೇಂಜರ್‌ ರೈಲನ್ನು ಬೆಳಗಾವಿ–ದೇಸೂರು ನಡುವೆ ರದ್ದು ಮಾಡಲಾಗಿತ್ತು. ಬೆಳಗಾವಿ–ಮೀರಜ್‌ ಪ್ಯಾಸೇಂಜರ್‌ ರೈಲಿನ ಸಂಚಾರವನ್ನು ಬೆಳಗಾವಿ–ಘಟಪ್ರಭಾ ನಡುವೆ, ಮೀರಜ್‌–ಬೆಳಗಾವಿ ಪ್ಯಾಸೇಂಜರ್‌ ರೈಲಿನ ಸಂಚಾರವನ್ನು ಘಟಪ್ರಭಾ–ಬೆಳಗಾವಿ ನಡುವೆ ಸಂಚಾರ ರದ್ದು ಮಾಡಲಾಗಿತ್ತು.

ADVERTISEMENT

ಪರಿಸ್ಥಿತಿ ಪರಿಶೀಲಿಸಿದ ಅಂಗಡಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಗುರುವಾರ ಹುಬ್ಬಳ್ಳಿ, ಬೆಳಗಾವಿ, ಗೋಕಾಕ್‌ ಮತ್ತು ಚಿಕ್ಕೋಡಿಯಲ್ಲಿ ಮಳೆಯಿಂದ ಆದ ಅನಾಹುತದ ಪರಿಶೀಲನೆ ನಡೆಸಿದರು.

ಸುರೇಶ ಅಂಗಡಿ ಬೆಂಗಳೂರು–ಬೆಳಗಾವಿ ತತ್ಕಾಲ್‌ ವಿಶೇಷ ರೈಲಿನ ಎಂಜಿನ್‌ನಲ್ಲಿ ಕುಳಿತು ಲೋಂಡಾದಿಂದ ಬೆಳಗಾವಿ ತನಕ ಪ್ರವಾಹ ಸ್ಥಿತಿ ನೋಡುವವರಿದ್ದರು. ಆದರೆ, ನಿರಂತರ ಮಳೆಯಿಂದ ರೈಲ್ವೆ ಸಂಚಾರದಲ್ಲಿ ವ್ಯತ್ಯಯವಾದ ಕಾರಣ ಅವರು ರಸ್ತೆ ಮೂಲಕ ತೆರಳಿದರು.

ಪ್ರವಾಹದಿಂದ ದುರಸ್ತಿಗೆ ಒಳಗಾದ ರೈಲ್ವೆ ಟ್ರ್ಯಾಕ್‌ಗಳ ನಿರ್ವಹಣಾ ಕಾರ್ಯವನ್ನು ‌ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್, ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ್‌ ವೀಕ್ಷಿಸಿದರು. ಹುಬ್ಬಳ್ಳಿಯಿಂದ ಗುರುವಾರ ಕೂಡ ನೆರೆ ಸಂತ್ರಸ್ತರಿಗೆ ಸಾಮಗ್ರಿಗಳನ್ನು ಪೂರೈಸಲಾಯಿತು.

ಗೋಕಾಕ, ರಾಯಬಾಗ, ಬೆಳಗಾವಿಯಲ್ಲಿ ಅಜಯ ಕುಮಾರ್‌ ಸಿಂಗ್‌ ಸಂತ್ರಸ್ತರಿಗೆ ಆಹಾರ ಸಾಮಗ್ರಿ ವೀಕ್ಷಿಸಿದರು. ಅಲ್ಲಿನ ಪ್ರಯಾಣಿಕರೊಂದಿಗೆ ಊಟ ಮಾಡಿದರು. ಕಳೆದ ಎರಡೂವರೆ ದಿನಗಳಲ್ಲಿ 1,050 ಜನರಿಗೆ ವಸತಿ ಹಾಗೂ ಉಟದ ಸೌಲಭ್ಯ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.