ADVERTISEMENT

ಸ್ವಾಮೀಜಿಗಳಿಗೆ ಯಾಕೆ ಬೇಕು ರಾಜಕಾರಣ: ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 12:29 IST
Last Updated 15 ಜನವರಿ 2020, 12:29 IST
   

ಹುಬ್ಬಳ್ಳಿ: ಸ್ವಾಮೀಜಿಗಳಿಗೆ ರಾಜಕಾರಣದ ವಿಷಯ ಏಕೆ ಬೇಕು; ಅವರು ಹೀಗೆ ಮಾಡುವುದರಿಂದ ಅಭಿವೃದ್ಧಿಗೆ ತೊಡಕಾಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ವಚನಾನಂದ ಸ್ವಾಮೀಜಿ ಮುಖ್ಯಮಂತ್ರಿಗೆ ಒತ್ತಡ ಹೇರಿದ ಹಿನ್ನೆಲೆಯ ಕುರಿತು ರಸ್ತೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಬುಧವಾರ ಪ್ರತಿಕ್ರಿಯಿಸಿದ ಹೊರಟ್ಟಿ ‘ಸ್ವಾಮೀಜಿಗಳ ಮಾತಿಗೆ ಕಟ್ಟು ಬಿದ್ದರೆ ಅಧಿಕಾರ ನಡೆಸುವುದು ಮುಖ್ಯಮಂತ್ರಿಗೆ ಕಷ್ಟವಾಗುತ್ತದೆ’ ಎಂದರು.

ಸಚಿವ ಜಗದೀಶ ಶೆಟ್ಟರ್‌ ಪ್ರತಿಕ್ರಿಯಿಸಿ ‘ತಮ್ಮ ಸಮಾಜದ ನಾಯಕರನ್ನು ಸಚಿವರನ್ನಾಗಿ ಮಾಡಿ ಎಂದು ಬೇಡಿಕೆ ಸಲ್ಲಿಸಬಹುದೇ ವಿನಃ ಒತ್ತಡ ಹೇರುವುದು ಸರಿಯಲ್ಲ. ಸಂಪುಟ ವಿಸ್ತರಣೆ ಮುಖ್ಯಮಂತ್ರಿಯ ಪರಮಾಧಿಕಾರ’ ಎಂದರು.

ADVERTISEMENT

‘ಬೇರೆ ಪಕ್ಷಗಳಿಂದ ಬಂದವರಿಂದಲೇ ನಮಗೆ ಅಧಿಕಾರ ಸಿಕ್ಕಿದೆ. ಹೊಸದಾಗಿ ಆರಿಸಿ ಬಂದವರಿಗೆ ಸಚಿವ ಸ್ಥಾನ ಕೊಡಲೇಬೇಕು. ಉಳಿದವರಿಗೆ ಬೇರೆ ಸಂದರ್ಭದಲ್ಲಿ ಅವಕಾಶ ಸಿಗುತ್ತದೆ’ ಎಂದರು.

‘ಎಲ್ಲ ಸಮಾಜಗಳ ಜನ ತಮ್ಮ ಸಮಾಜದವರನ್ನು ಸಚಿವರನ್ನಾಗಿ ಮಾಡಿ ಎಂದು ಆಸೆ ವ್ಯಕ್ತಪಡಿಸುವುದು ಸಹಜ. ಆದರೆ, ಇಂಥವರನ್ನೇ ಸಚಿವರನ್ನಾಗಿ ಮಾಡದಿದ್ದರೆ ನಿಮ್ಮ ಕೈ ಬಿಡುತ್ತೇವೆ ಎಂದು ಹೇಳಿಕೆ ನೀಡುವುದು ಅಪಾರ್ಥಕ್ಕೆ ಕಾರಣವಾಗುತ್ತದೆ’ ಎಂದರು.

‘ಮಂಗಳವಾರದ ಘಟನೆಗೆ ಸೀಮಿತವಾಗಿಯಷ್ಟೇ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಕಿಲ್ಲ. ಎಲ್ಲರ ಸಲಹೆ ಪಡೆದು ಸಂಪುಟ ವಿಸ್ತರಣೆ ಮಾಡುತ್ತಾರೆ. ಮುಖ್ಯಮಂತ್ರಿಗೆ ಸಹಜವಾಗಿ ಒತ್ತಡವಿದ್ದೇ ಇರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.