ತೀರ್ಪು
ಧಾರವಾಡ: ಪತ್ನಿಗೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಹತ್ಯೆ ಮಾಡಿದ ಪ್ರಕರಣದಲ್ಲಿ ಕುಂದಗೋಳ ತಾಲ್ಲೂಕಿನ ಭೂಕೊಪ್ಪದ ಈಶ್ವರಪ್ಪ ಅರಳಿಕಟ್ಟಿ ಎಂಬಾತಗೆ ಜೀವಾವಧಿ ಶಿಕ್ಷೆ ಹಾಗೂ ₹55,400 ದಂಡವನ್ನು ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ವಿಧಿಸಿದೆ.
ನ್ಯಾಯಾಧೀಶೆ ಪಲ್ಲವಿ ಬಿ.ಆರ್ ಅವರು ಆದೇಶ ನೀಡಿದ್ದಾರೆ. ದಂಡದ ಹಣದಲ್ಲಿ ₹50 ಸಾವಿರವನ್ನು ಮೃತ ಮಹಿಳೆಯ ಪುತ್ರಿಗೆ ಪರಿಹಾರವಾಗಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ಧಾರೆ.
ಏನಿದು ಪ್ರಕರಣ?: ಶೇಖವ್ವಗೆ ಪತಿ ಈಶ್ವರಪ್ಪ ಹಲವು ದಿನಗಳಿಂದ ಹಿಂಸೆ ನೀಡಿದ್ದರು. 2019 ಸೆಪ್ಟೆಂಬರ್ 23ರಂದು ಈಶ್ವರಪ್ಪ ಮನೆಯೊಳಗೆ ಪತ್ನಿಯನ್ನು ಕೂಡಿಹಾಕಿ ಹಲ್ಲೆ ಮಾಡಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ತೀವ್ರ ಗಾಯಗೊಂಡಿದ್ದ ಶೇಖವ್ವ ಅವರನ್ನು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಸೆ.28ರಂದು ಮೃತಪಟ್ಟಿದ್ದರು.
ಗುಡಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ಬಸವರಾಜ ಕಲ್ಲಮ್ಮನವರ, ಪಿಎಸ್ಐ ನವೀನ ಜಕ್ಕಲಿ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ಕೋರ್ಟ್ಗೆ ಸಲ್ಲಿಸಿದ್ದರು. ಸರ್ಕಾರಿ ವಕೀಲ ಬಿ.ವಿ.ಪಾಟೀಲ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.