ಹುಬ್ಬಳ್ಳಿ: ಭಾರತ ವಿಕಾಸ ಸಂಗಮ ಸಹಯೋಗದಲ್ಲಿ ವಿವಿಧ ಸಂಸ್ಥೆಗಳ ವತಿಯಿಂದ ‘ಯೋಗ–ಭಕ್ತಿ–ರಾಷ್ಟ್ರೀಯತೆ’ ಕುರಿತು ಫೆ.14 ರಂದು ಬೆಳಿಗ್ಗೆ 9.30ಕ್ಕೆ ಬಿವಿಬಿ ಕಾಲೇಜಿನ ಐಎಂಎಸ್ಆರ್ ಸಭಾಂಗಣದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ ಎಂದು ವಿಕಾಸ ಸಂಗಮದ ಸಂಚಾಲಕ ಡಾ. ಢವಳಗಿ ಸಿ.ಆರ್. ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಈಶ್ವರ ಭಟ್, ಅಮೆರಿಕ ಯೋಗ ವಿಶ್ವವಿದ್ಯಾಲಯದ ಕುಲಪತಿ ಡಾ. ಯೋಗಿ ದೇವರಾಜ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಬೆಳಿಗ್ಗೆ 10ಕ್ಕೆ ಅಮೆರಿಕ ಯೋಗ ವಿಶ್ವವಿದ್ಯಾಲಯದ ಉತ್ತರ ಕರ್ನಾಟಕ ಪ್ರಾದೇಶಿಕ ಅಧ್ಯಯನ ಕೇಂದ್ರ ಕಚೇರಿ ಉದ್ಘಾಟಿಸಲಾಗುವುದು. ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಸಂಪಾದಿಸಿರುವ ‘ಹರಿದಾಸರ 10,000 ಹಾಡುಗಳು’ ಕೃತಿ ಲೋಕಾರ್ಪಣೆ ಮಾಡಲಾಗುವುದು. ಅರ್ಥ ವ್ಯವಸ್ಥೆ ಮತ್ತು ದೇಶ ಭಕ್ತಿ ಕುರಿತು ಕೆ.ಎನ್. ಗೋವಿಂದಾಚಾರ್ಯ ಹಾಗೂ ಭಕ್ತಿ ಮತ್ತು ಯೋಗದ ಕುರಿತು ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರು ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಹರಿದಾಸರ 10,000 ಹಾಡುಗಳು: 2,300 ಪುಟಗಳಿರುವ ಈ ಕೃತಿ ಸಾಹಿತ್ಯ ಹಾಗೂ ಸಂಗೀತ ವಲಯದಲ್ಲಿ ಶತಮಾನದ ಗ್ರಂಥವೆಂದು ಪರಿಗಣಿತವಾಗಿದೆ. ನೂರಾರು ಹರಿದಾಸರು ರಚಿಸಿರುವ ಅಪೂರ್ವ ಕೀರ್ತನೆಗಳನ್ನು ಹೊಂದಿದೆ. ದೇಶದ ವಿವಿಧ ಮಠಗಳು, ದೇವಸ್ಥಾನಗಳಲ್ಲಿದ್ದ ದಾಸರ ಪದಗಳನ್ನು ಸಂಗ್ರಹಿಸಿ ಕೃತಿ ಸಿದ್ಧಪಡಿಸಿದ್ದಾರೆ ಎಂದು ವ್ಯಾಸ ಸಂಸ್ಕಾರ ಭಗವತ್ಪಾದ ಪ್ರತಿಷ್ಠಾನದ ಮುಖ್ಯಸ್ಥ ಡಾ. ಪವನ ಜೋಶಿ ತಿಳಿಸಿದರು.
ಶ್ರೀನಿವಾಸಮೂರ್ತಿ ಕೊರಳ್ಳಿ, ಎಚ್.ಎನ್. ಆಡಿನವರ, ಶಾಂತಣ್ಣ ಕಡಿವಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.