ADVERTISEMENT

ಅಧ್ಯಯನಶೀಲರಾಗಲು ದುಂದೂರ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 8:30 IST
Last Updated 7 ಅಕ್ಟೋಬರ್ 2011, 8:30 IST

ಗದಗ: ವಿದ್ಯಾರ್ಥಿಗಳು ಪಠ್ಯ ವಿಷಯದೊಂದಿಗೆ ಹೊಸ ಆವಿಷ್ಕಾರ, ಪ್ರಚಲಿತ ವಿದ್ಯಮಾನಗಳ ಕುರಿತು ಅರಿತುಕೊಳ್ಳಬೇಕು ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಸಂಗಮೇಶ ದುಂದೂರ ಸಲಹೆ ನೀಡಿದರು.

ಸ್ಥಳೀಯ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಪ್ರಸಕ್ತ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಣಿಜ್ಯ ಅಧ್ಯಯನ ಮಾಡಲು ವಿದ್ಯಾರ್ಥಿಗಳು ಆಸಕ್ತಿ ತೋರಬೇಕು. ವಿದ್ಯಾರ್ಥಿ ದೆಸೆಯಲ್ಲಿ ಕಠಿಣ ಪ್ರರಿಶ್ರಮ ಹಾಗೂ ಬದ್ಧತೆಗಳ ಜೊತೆಗೆ ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳಬೇಕು. ಗುರಿ ಸಾಧನೆಗಾಗಿ ಸತತ ಅಧ್ಯಯನಶೀಲರಾಗಬೇಕು ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ವಿ.ಆರ್. ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.  ಪ್ರೊ. ಐ.ವಿ. ಬೆಳ್ಳಿಕಟ್ಟಿ, ವಿ.ಎಲ್. ಚಳ್ಳಮರದ ಮತ್ತಿತರರು ಹಾಜರಿದ್ದರು.

ಡಾ. ಎಂ.ಎಲ್. ಗುಳೇದಗುಡ್ಡ ಸ್ವಾಗತಿಸಿದರು. ರೇಶ್ಮಾ ಹುಬ್ಬಳ್ಳಿ, ಕುಶಾಲ ಹುಂಡಿಯಾ ಹಾಗೂ ಶ್ರೀಕಾಂತ ಐಲಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಂ. ಬೆಳಗಾಂವ ವಂದಿಸಿದರು.

ಡಿ.ಇಡಿ ಫಲಿತಾಂಶ
ನರೇಗಲ್:
ಸ್ಥಳೀಯ ಎಸ್.ಆರ್. ಪಾಟೀಲ ಡಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ಒಟ್ಟು ಫಲಿತಾಂಶ ಶೇಕಡಾ 100ರಷ್ಟಾಗಿದೆ.
ಮೈಲಾರಪ್ಪ ಅಳವಂಡಿ (ಶೇ. 87.09) ಕಾಲೇಜಿಗೆ ಪ್ರಥಮ, ವೀರೇಶ ಹಿರೇಮಠ (ಶೇ. 86.04) ದ್ವಿತೀಯ ಹಾಗೂ ಸುವರ್ಣಾ ದೇಸಾಯಿ (ಶೇ. 85.81) ತೃತೀಯ ಸ್ಥಾನ ಪಡೆದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.