ಗದಗ: ನಗರದಲ್ಲಿ ಕಟೌಟ್, ಬ್ಯಾನರ್, ಫ್ಲೆಕ್ಸ್, ಜಾಹೀರಾತು ಫಲಕಗಳನ್ನು ಪೂರ್ವಾನುಮತಿ ಇಲ್ಲದೇ ಹಾಕತಕ್ಕದ್ದಲ್ಲ. ನಿಯಮ ಉಲ್ಲಂಘಿಸಿದರೆ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲಿಸದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ.
‘ಇತ್ತೀಚೆಗೆ ನಡೆದ ಗದಗ ಉತ್ಸವದಲ್ಲಿ ಈ ಎರಡೂ ನಿಯಮಗಳು ಉಲ್ಲಂಘನೆ ಆಗಿದ್ದವು. ತಡವಾಗಿ ಆದರೂ, ಸರ್ಕಾರಿ ನಿಯಮಗಳ ಬಗ್ಗೆ ಜಿಲ್ಲಾಧಿಕಾರಿಗೆ ಜ್ಞಾನೋದಯ ಆಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಗದಗ ಉತ್ಸವದಲ್ಲಿ ಈ ನಿಯಮಗಳು ಇರಲಿಲ್ಲವೇ, ಅಂದು ಈ ಎಲ್ಲ ನಿಯಮಗಳು ಉಲ್ಲಂಘನೆ ಆದಾಗ ಸುಮ್ಮನೆ ಕುಳಿತು, ಈಗ ಬಿಜೆಪಿ ಪರಿವರ್ತನಾ ಯಾತ್ರೆ ಗದಗ ಜಿಲ್ಲೆಗೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಸುತ್ತೋಲೆ ಹೊರಡಿಸಿದ್ದನ್ನು ಗಮನಿಸಿದರೆ ಜಿಲ್ಲಾಧಿಕಾರಿಗಳು ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಸ್ಪಷ್ಟವಾಗುತ್ತದೆ’ ಎಂದು ಅವರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.