ಗದಗ: ಪೊಲೀಸರು ಆರೋಗ್ಯ ವಿಮೆ ಸೌಲಭ್ಯ ಪಡೆದುಕೊಳ್ಳಬೇಕು ಎಂದು ನಿವೃತ್ತ ಪೊಲೀಸ ಅಧಿಕಾರಿ ಆರ್.ಜಿ. ಹೊನ್ನಾವರ ಸಲಹೆ ನೀಡಿದರು. ಸ್ಥಳೀಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ ಇಲಾಖೆ ವತಿಯಿಂದ ಶನಿವಾರ ನಡೆದ ‘ಪೊಲೀಸ್ ಧ್ವಜ ದಿನಾಚರಣೆ’ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ನಿವೃತ್ತ ಪೊಲೀಸರಿಗೆ ಆರೋಗ್ಯ ವಿಮೆ ಜಾರಿಗೆ ಬರುತ್ತಿದೆ. ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು. ಈ ಯೋಜನೆ ಫಲಾನುಭವಿಗಳಿಗೆ ಉಚಿತವಾಗಿ ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶವಿರುತ್ತದೆ. ಇದರ ಮೂಲಕ ಆರೋಗ್ಯ ಸೇವೆ ಪಡೆದುಕೊಳ್ಳಬೇಕು. ಪೊಲೀಸರು ಯಾವ ಘಟಕದಲ್ಲಿ ನಿವೃತ್ತರಾಗಿರುತ್ತಾರೆಯೋ ಅದೇ ಘಟಕದಲ್ಲಿ ಆರೋಗ್ಯ ವಿಮೆ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ’ ಎಂದರು.
‘ಪೊಲೀಸ್ ಧ್ವಜ ದಿನಾಚರಣೆ ನಿವೃತ್ತರಿಗೆ ಮೀಸಲಾದ ದಿನ. ನಿವೃತ್ತರನ್ನು ಕರೆದು ಸನ್ಮಾನಿಸುತ್ತಿರುವುದು ಒಂದು ಒಳ್ಳೆಯ ಸಂಪ್ರದಾಯ. ಈ ಗೌರವ ಬೇರೆ ಇಲಾಖೆಯಲ್ಲಿ ಸಿಗುವುದಿಲ್ಲ. ನಿವೃತ್ತಿಯಾದವರು ಒಂದೆಡೆ ಸೇರಿ ಕಷ್ಟಸುಖ ವಿಚಾರಿಸಿಕೊಳ್ಳಲು ಉತ್ತಮ ಅವಕಾಶ ದೊರೆತಿದೆ’ ಎಂದು ಹೇಳಿದರು. ಮುಖ್ಯ ಅತಿಥಿಗಳು ವಿವಿಧ ಪೊಲೀಸ್ ತಂಡಗಳಿಂದ ವಂದನೆ ಸ್ವೀಕರಿಸಿದರು.ಎಸ್ಪಿ ರವಿಕುಮಾರ ನಾಯಕ ಸ್ವಾಗತಿಸಿದರು. ಡಿವೈಎಸ್ಪಿ ಸುರೇಶ ಮಸೂತಿ ಹಾಜರಿದ್ದರು. ಗ್ರಾಮೀಣ ಸಿಪಿಐ ಆರ್.ಎಸ್. ಉಜ್ಜನಕೊಪ್ಪ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.