ಗದಗ: ಪ್ರತಿ ಮಗುವಿಗೂ ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀಡುವ ದೃಷ್ಟಿಯಿಂದ ಸರ್ಕಾರ ಅನುಷ್ಠಾನಗೊಳಿಸಿರುವ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಯಡಿ ಶಾಲಾ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಕಾನ್ವೆಂಟ್ ಶಿಕ್ಷಣದ ವ್ಯಾಮೋಹದಿಂದ ನಗರದ ಪ್ರದೇಶದ ಶಾಲೆಗಳಿಗೆ ಹೆಚ್ಚು ಅರ್ಜಿ ಸಲ್ಲಿಕೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಸಂಖ್ಯೆ ಜಾಸ್ತಿ ಇಲ್ಲದ ಕಾರಣ ಅರ್ಜಿ ಸಲ್ಲಿಕೆ ಸಂಖ್ಯೆ ಕಡಿಮೆ ಎನ್ನುವುದು ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡುವ ಕಾರಣ.
ಕಳೆದ ವರ್ಷ ಲಭ್ಯ ಇದ್ದ 2142 ಸೀಟುಗಳ ಪೈಕಿ ಶೇಕಡಾ 60ರಷ್ಟು ಸೀಟು ಮಾತ್ರ ಭರ್ತಿಯಾಗಿತ್ತು. ಪ್ರಸ್ತಕ ಸಾಲಿನಲ್ಲಿ ಆರ್ಟಿಇ ಅಡಿ ಐದು ತಾಲ್ಲೂಕಿನ ಹತ್ತು ಶಾಲೆ (ಗದಗ ಶಹರ–4, ಗದಗ ಗ್ರಾಮೀಣ–1, ಮುಂಡರಗಿ–2, ನರಗುಂದ–1, ರೋಣ–1, ಶಿರಹಟ್ಟಿ–1)ಗಳಲ್ಲಿ ಮಾತ್ರ ಆಂಗ್ಲ ಮಾಧ್ಯಮ ಇದೆ. ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮ ಅನುಸರಿಸುವ ಶಾಲೆಗಳು ಸೇರಿದಂತೆ ಎಲ್ಲ ಅನುದಾನ ರಹಿತ ಶಾಲೆಗಳಲ್ಲಿ (ಅಲ್ಪಸಂಖ್ಯಾತರ ಶಾಲೆಗಳ ಹೊರತು ಪಡಿಸಿ) ಶೇ. 25ರಷ್ಟು ಸೀಟು ಮೀಸಲಿಡಬೇಕು.
ಹಿಂದುಳಿದ ಸಮುದಾಯದವರು, ದಲಿತರು, ಅಲ್ಪಸಂಖ್ಯಾತರು, ಬಡವರ ಮಕ್ಕಳಿಗೂ ಶಿಕ್ಷಣ ಹಕ್ಕಿನ ಸೌಲಭ್ಯಗಳು ಸಿಗಬೇಕು ಮತ್ತು ಯಾರು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕೇಂದ್ರ ಆರ್ಟಿಇ ಜಾರಿಗೊಳಿಸಿ ಮೂರು ವರ್ಷ ಕಳೆದರೂ ಪೋಷಕರು, ಮಕ್ಕಳು, ಜನಪ್ರತಿನಿಧಿಗಳು, ಶಿಕ್ಷಣ ಆಯೋಜಕರಿಗೆ ಅಧಿನಿಯಮದ ಸಮರ್ಪಕ ಅರಿವು ಇಲ್ಲ.
ಜಿಲ್ಲೆಯಲ್ಲಿ ಈ ಕಾಯ್ದೆಯಡಿ 2014–15ನೇ ಸಾಲಿಗೆ ಖಾಸಗಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಒಂದನೇ ತರಗತಿಗೆ ಆಯ್ದ 185 ಶಾಲೆಗಳಲ್ಲಿ ಶೇಕಡಾ 25ರಷ್ಟು ಸೀಟುಗಳು ಲಭ್ಯ ಇವೆ. ಒಟ್ಟಾರೆ 185 ಶಾಲೆಗಳಿಂದ 1875 ವಿದ್ಯಾರ್ಥಿಗಳಿಗೆ ಆರ್ಟಿಇ ಸೀಟುಗಳು ಲಭ್ಯವಾಗಲಿದೆ.
ದಾಖಲಾತಿಗೆ ಪ್ರವೇಶ ಪರೀಕ್ಷೆ, ಮೌಖಿಕ ಪರೀಕ್ಷೆ, ಸಂದರ್ಶನ ಇದಾವುದು ಇರುವುದಿಲ್ಲ. ಪೋಷಕರ ಆದಾಯ ₨3.5 ಲಕ್ಷ ಇರುವವರು ಆರ್ಟಿಇನಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು. ವರಮಾನ ಒಂದು ಲಕ್ಷಕ್ಕಿಂತ ಕಡಿಮೆ ಇರುವ ಪೋಷಕರ ಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ. ಇಂಥ ಅರ್ಜಿಗಳು ಜಾಸ್ತಿ ಇದ್ದರೆ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಜ.7ರಿಂದ ಆರಂಭವಾಗಿದ್ದು, ಫೆ.8ರವೆಗೂ ಅರ್ಜಿಗಳನ್ನು ಸಂಬಂಧಪಟ್ಟ ಶಾಲೆ, ಆ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಬಹುದು. ಬಿಇಒ ಅರ್ಜಿಗಳನ್ನು ಪರಿಶೀಲಿಸಿ ಫೆ.17ರೊಳಗೆ ಆಯ್ಕೆ ಪಟ್ಟಿ ಸಲ್ಲಿಸುವರು. ದಾಖಲೆಗಳನ್ನು ಅನುಮೋದಿಸಿ ಫೆ. 28ರೊಳಗೆ ಶಾಲೆಗಳಿಗೆ ಪಟ್ಟಿಯನ್ನು ಹಿಂದುರುಗಿಸಬೇಕು. ಮಾ.3ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ.
ಪ್ರವೇಶ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿ ಶೇ. 7.5, ಪರಿಶಿಷ್ಟ ಪಂಗಡ ಶೇ.1.5 ಹಾಗೂ ಇತರ ವರ್ಗದವರಿಗೆ ಶೇ. 16 ಮೀಸಲಾತಿ ನೀಡಬೇಕು. ಪೂರ್ವ ಪ್ರಾಥಮಿಕ ತರಗತಿಗೆ ಮಾರ್ಚ್ 3ರಂದು ದಾಖಲಾತಿ ಆರಂಭವಾಗುವುದು.
ಸಹಾಯವಾಣಿ
ಆರ್ಟಿಇ ಅರ್ಜಿ ಸಲ್ಲಿಕೆ ಅಥವಾ ಈ ಕುರಿತು ಇನ್ಯಾವುದೇ ಮಾಹಿತಿ ಪಡೆಯಲು ಪೋಷಕರು ಜಿಲ್ಲಾ ಸಾರ್ವಜನಿಕ ಉಪ ನಿರ್ದೇಶಕ ಕಚೇರಿ ದೂ. 220644 ಸಹಾಯವಾಣಿಗೆ ಕರೆ ಮಾಡಬಹುದು. ಶಿಕ್ಷಣ ಇಲಾಖೆ ಅಧಿಕಾರಿಗಳು ಆರ್ಟಿಇ ಕುರಿತ ಮಾಹಿತಿ ಒದಗಿಸುವರು.
ಆರ್ಟಿಇನಲ್ಲಿ ದಾಖಲಾತಿ ಬಯಸುವ ವಿದ್ಯಾರ್ಥಿಗಳು ವಾಸಸ್ಥಳ ವ್ಯಾಪ್ತಿಯ, ಸಮೀಪದ ಶಾಲೆಯಲ್ಲಿ ಪ್ರವೇಶ ಪಡೆಯಲು ಅರ್ಹರು. ಒಬ್ಬ ವಿದ್ಯಾರ್ಥಿ ಎರಡು ಕಡೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ನೆರೆಹೊರೆ ಶಾಲೆಗೆ ಆದ್ಯತೆ ನೀಡಿ ಪ್ರವೇಶ ನೀಡಲಾಗುವುದು.
ನಿಯಮ ಉಲ್ಲಂಘಿಸಿದರೆ ಕ್ರಮ
ಆರ್ಟಿಇ ಅರ್ಜಿ ಸ್ವೀಕರಿಸಲು ಶಾಲೆಗಳು ನಿರಾಕರಿಸಿದರೆ ಆ ವ್ಯಾಪ್ತಿಯ ಶಿಕ್ಷಣಾಧಿಕಾರಿಗೆ ಸಲ್ಲಿಸಬಹುದು. ಆಯ್ಕೆಯಾದ ಮಕ್ಕಳಿಗೆ ಸೀಟು ನಿರಾಕರಿಸಿದರೆ ಕ್ರಮ ಜರುಗಿಸಲಾಗುವುದು. ನಗರ ಪ್ರದೇಶ ಶಾಲೆಗಳಿಗೆ ಅರ್ಜಿ ಹೆಚ್ಚು ಸಲ್ಲಿಕೆಯಾಗಿದೆ. ಮಕ್ಕಳನ್ನು ಕಾಂನ್ವೆಟ್ಗೆ ಸೇರಿಸಬೇಕೆಂಬ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಪೋಷಕರು ಅರ್ಜಿ ಸಲ್ಲಿಸಲು ಹಿಂದೇಟು ಹಾಕಿರುವ ಸಾಧ್ಯತೆಯೂ ಇದೆ. ಆರ್ಟಿಇಗೆ ಒಳಪಡದ ಶಾಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಇಲಾಖಾ ಆಯುಕ್ತರಿಗೆ ಪತ್ರ ಬರೆಯಲಾಗಿದೆ.
–ರಾಜೇಂದ್ರ ಪ್ರಸಾದ್, ಡಿಡಿಪಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.