ADVERTISEMENT

ಇಳೆಗಿಳಿದ ಮಳೆ: ಕರುಣೆ ತೋರಿದ ವರುಣ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 7:05 IST
Last Updated 11 ಜೂನ್ 2011, 7:05 IST

ಗಜೇಂದ್ರಗಡ: ವರುಣನ ನಿರೀಕ್ಷೆಯಲ್ಲಿದ್ದ ರೈತ ಸಮುದಾಯದ ಮೇಲೆ ಕರುಣೆ ತೋರಿದೆ ಮೃಗಶಿರಾ ಮಳೆ. ಶುಕ್ರವಾರ ಮಧ್ಯಾಹ್ನ ಮತ್ತು ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದು ಅನ್ನದಾತರ ಮೊಗ ದಲ್ಲಿ ಸಂತಸ ಮೂಡಿಸಿದೆ.

ಮಧ್ಯಾಹ್ನ 1.40ಗಂಟೆಗೆ ಜಿಟಿಜಿಟಿ ಆರಂಭವಾದ ಮಳೆ ನಂತರ ತನ್ನ ಆರ್ಭಟ ಹೆಚ್ಚಿಸಿಕೊಂಡಿತು. ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಯು ನಂತರ ಬಿಡುವು ಕೊಟ್ಟಿತು. ಮತ್ತೆ ಸಂಜೆ 4.30ರ ಸುಮಾರಿಗೆ ಸುರಿಯತೊಡಗಿದ ಮಳೆಯಿಂದಾಗಿ ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ತೆರಳಲು ಪರದಾಡಿದರು.

ಜನಜೀವನ ಅಸ್ತವ್ಯಸ್ತ: ಒಟ್ಟಾರೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ರಸ್ತೆಯ ತುಂಬೆಲ್ಲ ನೀರು ಹರಿದು ಜನ ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು.  ಪಟ್ಟಣಕ್ಕೆ ವ್ಯಾಪಾರ ವಹಿವಾಟಿಗೆ ಬಂದಿದ್ದ ಅಕ್ಕ ಪಕ್ಕದ ಗ್ರಾಮಗಳ ಜನತೆ ಮಳೆಯಲ್ಲಿ ನೆನೆಯಬೇಕಾಯಿತು. ಇತ್ತ ಗದುಗಿನಲ್ಲೂ ಶುಕ್ರವಾರ ಸಂಜೆ ಒಂದು ಗಂಟೆ ಮಳೆಯಾಗಿದೆ.

ರೈತರಿಗೆ ಅನುಕೂಲ: ರೋಹಿಣಿ ಮಳೆ ಕೊನೆಯ ಹಂತದಲ್ಲಿ ಸುರಿದಿದ್ದರಿಂದ ರೈತರು ಸಂಪೂರ್ಣ ಬಿತ್ತನೆ ಮಾಡಲು ಸಾಧ್ಯವಾಗಿರಲಿಲ್ಲ. ಜೊತೆಗೆ ಹೊಲದಲ್ಲಿ ಬಿತ್ತನೆಗೆ ಅವಶ್ಯವಿರುವಷ್ಟು ಹಸಿಯೂ ಇರಲಿಲ್ಲ. ಹೀಗಾಗಿ ಶುಕ್ರವಾರ ಮೃಗಶಿರಾ ಮಳೆ ಸುರಿದಿದ್ದರಿಂದ ರೈತರಿಗೆ ಬಿತ್ತನೆ ಮಾಡಲು ಅನುಕೂಲವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.