ADVERTISEMENT

ಎತ್ತುಗಳಿಗೆ ವಿಷವಿಕ್ಕಿಕೊಂದ ದುರುಳರು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2012, 7:40 IST
Last Updated 15 ನವೆಂಬರ್ 2012, 7:40 IST

ಗಜೇಂದ್ರಗಡ: ಇಲ್ಲಿಯ ರಾಜೂರ ಗ್ರಾಮದ ರೈತ ಶರಣಪ್ಪ ನಿಂಗಪ್ಪ ಸಜ್ಜನರ ಎಂಬುವರ ತೋಟದ ಮನೆಯಲ್ಲಿನ ಎರಡು ಎತ್ತು ಹಾಗೂ ಒಂದು ಆಕಳಿಗೆ ದುಷ್ಕರ್ಮಿಗಳು ವಿಷ ಉಣಿಸಿರುವ ಅಮಾನವೀಯ ಘಟನೆ ನಡೆದಿದೆ.

ವಿಷದ ಪ್ರಖರತೆ ತೀವ್ರಗೊಂಡಾಗ ಎತ್ತುಗಳು ಹಾಗೂ ಆಕಳು ಹಾರಾಟ, ಚೀರಾಟ ನಡೆಸಿವೆ. ಆದರೆ, ಗ್ರಾಮಸ್ಥರೆ ಲ್ಲರೂ ಹಬ್ಬದ ಸಂಭ್ರಮಾಚರಣೆಯಲ್ಲಿದ್ದರಿಂದ ಮೂಕ ಪ್ರಾಣಿಗಳ ಸಂಕಟ ಕೇಳಿಸಲೇ ಇಲ್ಲ.  ಬುಧವಾರ ನಸುಕಿನ ಜಾವ ತೋಟಕ್ಕೆ ಬಂದ ರೈತ ಶರಣಪ್ಪ ಸಜ್ಜನರ ಎತ್ತುಗಳ ಸದ್ದು ಕೇಳಿಸದಿದ್ದಾಗ ಗಾಬರಿಗೊಂಡು ಎತ್ತು ಗಳನ್ನು ಕಟ್ಟಿಹಾಕಿದ್ದ ಜಾಗಕ್ಕೆ ಹೋಗಿ ನೋಡಿದಾಗ ಎತ್ತುಗಳು ಹಾಗೂ ಆಕಳು ಸತ್ತು ಮಲಗಿರುವುದು ಬೆಳಕಿಗೆ ಬಂದಿದೆ.

ಸುದ್ದಿ ಕಾಳ್ಗಿಚಿನಂತೆ ಹರಡುತ್ತಿದ್ದಂತೆ ರಾಜೂರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ತಂಡೋಪ ತಂಡವಾಗಿ ಶರಣಪ್ಪ ಸಜ್ಜನರ ಅವರ ತೋಟಕ್ಕೆ ಬಂದು ಸತ್ತು ಬಿದ್ದ ಜಾನು ವಾರುಗಳನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತು, ಮುಗ್ದ ಜಾನುವಾರುಗಳನ್ನು ನಿರ್ದಯವಾಗಿ ಕೊಂದು ಹಾಕಿದ ದುಷ್ಕರ್ಮಿ ಗಳನ್ನು ಶಪಿಸಿದರು. 

`ರೈತ ಶರಣಪ್ಪ ಸಜ್ಜನರ ಯಾರೊಂದಿಗೆಯೂ ವಿರೋಧ ಕಟ್ಟಿಕೊಂಡವನಲ್ಲ. ಯಾರೊಂದಿಗೂ ತಂಟೆ-ತಕರಾರು ಮಾಡಿಕೊಂಡವನಲ್ಲ. ಇಂಥ ರೈತನ ಬಾಳಿಗೆ ಆಸರೆಯಾಗಿದ್ದ ಎತ್ತುಗಳು ಹಾಗೂ ಆಕಳಿಗೆ ವಿಷ ಉಣಿಸಿದ ದುಷ್ಟರ ಹೇಯ ಕೃತ್ಯದಿಂದಾಗಿ ಶರಣಪ್ಪ ಸಜ್ಜನರ ಕುಟುಂಬ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಹೀಗಾಗಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಎತ್ತುಗಳ ಸಾವಿಗೆ ಕಾರಣರಾದವರನ್ನು ಬಂಧಿಸಿ, ನಷ್ಟವನ್ನು ಭರಿಸಿಕೊಡಬೇಕು~ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದರು.

ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ತಾಲ್ಲೂಕು ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ, ಸತ್ತ ಜಾನುವಾರುಗಳ ವೈದ್ಯಕೀಯ ಪರೀಕ್ಷೆಗೆ ನಡೆಸಿದರು. ವೈದ್ಯಕೀಯ ಪರೀಕ್ಷೆಯ ವರದಿ ಆಧರಿಸಿ ತನಿಖೆ ನಡೆಸಲಾಗುವುದು ಎಂದು ಪೂಲೀಸ್ ಅಧಿಕಾರಿಗಳು ಸ್ಪಷ್ಟ ಪಡಿಸಿದರು. ಈ ಕುರಿತು ಗಜೇಂದ್ರಗಡ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.