ಲಕ್ಷ್ಮೇಶ್ವರ: ಇಲ್ಲಿನ ಸರ್ಕಾರಿ ಆಸ್ಪತ್ರೆ ಸುತ್ತಮುತ್ತ ಕಸದ ರಾಶಿ ತುಂಬಿದ್ದು, ಸಿಬ್ಬಂದಿ ಉಸಿರುಗಟ್ಟಿಸುವ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 30ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಯ ಬಲಭಾಗದಲ್ಲಿ ಸಾಕಷ್ಟು ತ್ಯಾಜ್ಯ ತುಂಬಿಕೊಂಡಿದ್ದು, ಕುಡಿದು ಎಸೆದಿರುವ ಎಳನೀರಿನ ಬುಡ್ಡೆಗಳ ರಾಶಿ ತುಂಬಿದೆ.
ಆಸ್ಪತ್ರೆಯಲ್ಲಿ ಸೊಳ್ಳೆಗಳ ಹಾವಳಿ ಜೋರಾಗಿದೆ. ಚಿಕಿತ್ಸೆಗೆ ದಾಖಲಾದವರು ಸೊಳ್ಳೆಗಳಿಂದ ಕಚ್ಚಿಸಿಕೊಂಡು ಮತ್ತೆ ರೋಗಿಗಳಾಗಿಯೇ ಇಲ್ಲಿಂದ ಹೊರ ಬರಬೇಕಾದ ಪರಿಸ್ಥಿತಿ ಇದೆ.
ಆಸ್ಪತ್ರೆ ಎದುರು ಸಿಬ್ಬಂದಿಗೆ ನಿರ್ಮಿಸಿರುವ ಮನೆಗಳೂ ಅಕ್ಷರಶಃ ಕಸದ ತೊಟ್ಟಿಯಂತಿವೆ. ಮನೆಗಳ ಸುತ್ತ ಗಿಡಗಳು ಆಳೆತ್ತರಕ್ಕೆ ಬೆಳೆದಿದ್ದು, ವಿಷ ಜಂತುಗಳಿಗೆ ಆಶ್ರಯ ನೀಡಿವೆ. ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ, ಮನೆಗಳ ಮುಂದೆಯೇ ಕೊಚ್ಚೆ ನೀರು ನಿಲ್ಲುತ್ತಿದೆ. ಹಂದಿಗಳ ಹಾವಳಿ ಜೋರಾಗಿದ್ದು, ವಾತಾವರಣ ಇನ್ನಷ್ಟು ಹದಗೆಟ್ಟಿದೆ.
ಆಸ್ಪತ್ರೆ ಆವರಣದಲ್ಲಿನ ಶವಾಗಾರದ ಸುತ್ತ ಮುಳ್ಳಿನ ಗಿಡಗಳು ಬೆಳೆದಿದ್ದು, ವಿಷ ಜಂತುಗಳು ವಾಸವಾಗಿವೆ. ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ಪ್ರಕರಣಗಳು ಬಂದರೆ, ವೈದ್ಯರು ಜೀವವನ್ನು ಕೈಯಲ್ಲಿ ಹಿಡಿದು ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಆಸ್ಪತ್ರೆ ಸುತ್ತ ಗಬ್ಬೆದ್ದ ವಾತಾವರಣ ಇದ್ದರೂ, ಅದನ್ನು ಸ್ವಚ್ಛ ಮಾಡಲು ಇದುವರೆಗೂ ಯಾರೂ ಕ್ರಮ ವಹಿಸಿಲ್ಲ.
‘ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಆಸ್ಪತ್ರೆ ಆವರಣದ ಸ್ವಚ್ಛತೆಗೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಪಟ್ಟಣ ನಿವಾಸಿಗಳಾದ ಪದ್ಮರಾಜ ಪಾಟೀಲ, ಶಂಕರ ಬಾಳಿಕಾಯಿ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.