ADVERTISEMENT

ಗದಗ ನಗರದಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 6:45 IST
Last Updated 18 ಜೂನ್ 2017, 6:45 IST
ಗದುಗಿನಲ್ಲಿ ಶನಿವಾರ ಮಧ್ಯಾಹ್ನ ಸುರಿಯುತ್ತಿರುವ ಮಳೆಯಲ್ಲೇ ಬಾಲಕಿಯರು ಮನೆಗೆ ಧಾವಿಸಿದರು
ಗದುಗಿನಲ್ಲಿ ಶನಿವಾರ ಮಧ್ಯಾಹ್ನ ಸುರಿಯುತ್ತಿರುವ ಮಳೆಯಲ್ಲೇ ಬಾಲಕಿಯರು ಮನೆಗೆ ಧಾವಿಸಿದರು   

ಗದಗ: ನಗರದಲ್ಲಿ ಶನಿವಾರ ಮಧ್ಯಾಹ್ನ ಒಂದೂವರೆ ಗಂಟೆಗಳ ಕಾಲ ಧಾರಾಕಾರ ಮಳೆ ಸುರಿಯಿತು. ಬೆಳಿಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣ ಇತ್ತು. 3 ಗಂಟೆ ಸುಮಾರಿಗೆ ಜಿಟಿ ಜಿಟಿ ಮಳೆ ಆರಂಭವಾಗಿ, ಕೆಲ ನಿಮಿಷಗಳಲ್ಲಿ ಜೋರಾಗಿ ಸುರಿಯಲಾರಂಭಿಸಿತು. ಗಾಳಿ  ಆರ್ಭಟವೂ  ಜೋರಾಗಿತ್ತು.

ಭರ್ಜರಿ ಮಳೆಯಿಂದ ನಗರದ ಪ್ರಮುಖ ಕಾಲುವೆಗಳು ಉಕ್ಕಿ ಹರಿದವು. ಚರಂಡಿ ತ್ಯಾಜ್ಯ, ಕೊಚ್ಚೆ ನೀರು ರಸ್ತೆಗೆ ಹರಿಯಿತು. ತಗ್ಗು ಪ್ರದೇಶಗಳಲ್ಲಿದ್ದ ಮನೆಗಳಿಗೆ ನೀರು ನುಗ್ಗಿತು. ವಡ್ಡರಗೇರಿ ಯಲ್ಲಿ ಮೂರು ಹಳೆಯ ಮಣ್ಣಿನ ಮನೆ ಗಳ ಗೋಡೆ ಕುಸಿದು ಹಾನಿಯಾಗಿದೆ.

ನಗರದ ಬಹುತೇಕ ರಸ್ತೆಗಳಲ್ಲಿ 2 ಅಡಿಯಷ್ಟು ನೀರು ನಿಂತಿತ್ತು. ಹಳೆ ಜಿಲ್ಲಾಧಿಕಾರಿ ಕಟ್ಟಡದ ಎದುರಿನ ರಸ್ತೆ, ಹಳೆ ಬಸ್‌ ನಿಲ್ದಾಣ, ಹಾತಲಗೇರಿ ನಾಕಾ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು.

ADVERTISEMENT

‘ಬೆಟಗೇರಿ ಹೆಲ್ತ್‌ಕ್ಯಾಂಪ್‌ ಪ್ರದೇಶ ದಲ್ಲಿರುವ ಗದುಗಿನ ದೊಡ್ಡ ಚರಂಡಿ 5 ವರ್ಷಗಳ ಬಳಿಕ ತುಂಬಿ ಹರಿದಿದ್ದನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ‘ನಾಲ್ಕೈದು ವರ್ಷಗಳ ಹಿಂದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆಯಾಗಿತ್ತು. ನಂತರ ಇದೇ ಮೊದಲ ಬಾರಿಗೆ ಈ ಗಟಾರು ತುಂಬಿ ಹರಿದಿದೆ’ ಎಂದು ಬೆಟ ಗೇರಿ ನಿವಾಸಿ ಬಸಪ್ಪ ಮಂಟೂರ ಆಶ್ಚರ್ಯ ವ್ಯಕ್ತಪಡಿಸಿದರು.

ಮನೆಗಳಿಗೆ ನುಗ್ಗಿದ ನೀರು: ಮಳೆಯಿಂದ ಗಂಗಾಪುರ ಪೇಟೆ, ಜನತಾ ಬಜಾರ್‌ ಹಿಂದಿನ ಪ್ರದೇಶ, ಹಾತಲಗೇರಿ ನಾಕಾ, ಪಂಚಾಕ್ಷರಿ ನಗರ, ಹೊಂಬಳ ರಸ್ತೆ, ಕುಷ್ಠರೋಗ ಕಾಲೊನಿ, ಮಾಳೆಕೊಪ್ಪ ಸಂದಿ, ಖಾನತೋಟ ಸೇರಿ ಹಲವೆಡೆ ಮನೆ ಗಳಿಗೆ ಚರಂಡಿ ನೀರು ನುಗ್ಗಿ ತೊಂದರೆ ಆಯಿತು. ಮಳೆ ಕಡಿಮೆ ಆದ ನಂತರ ನಿವಾಸಿಗಳು, ಮನೆಯಲ್ಲಿನ ಕೊಚ್ಚೆ ನೀರು ಹೊರಹಾಕುವಲ್ಲಿ ನಿರತರಾದರು.

ರೈತರ ಮೊಗದಲ್ಲಿ ಹರ್ಷ ಮೂಡಿಸಿದ ಮಳೆ: ಕಳೆದೊಂದು ವಾರದಿಂದ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ತುಂತುರು ಮಳೆಯಾಗುತ್ತಿತ್ತು. ತಾಲ್ಲೂ ಕಿನ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದರೂ, ನಗರದೊಳಗೆ ಮಾತ್ರ ಮುಂಗಾರು ಮುನಿಸು ಮುಂದುವರಿ ದಿತ್ತು. ಶನಿವಾರ ಈ ಕೊರತೆ ನೀಗಿಸುವಂತೆ ವರುಣ ಕೃಪೆ ತೋರಿದ್ದಾನೆ.  ಗ್ರಾಮಾಂತರ ಪ್ರದೇಶದಲ್ಲಿ ಕರೆ, ಕೃಷಿ ಹೊಂಡ ತುಂಬಿದೆ. ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರೈತರ ಮೊಗ ದಲ್ಲಿ ಹರ್ಷ ಮೂಡಿದೆ.

ವಿದ್ಯುತ್‌  ವ್ಯತ್ಯಯ
ತ್ರೈಮಾಸಿಕ ನಿರ್ವಹಣಾ ಕಾರ್ಯದ  ಹಿನ್ನೆಲೆಯಲ್ಲಿ ಗದಗ ನಗರದಲ್ಲಿ ಶನಿವಾರ ಬೆಳಿಗ್ಗೆ 10ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.
ಒಂದೆಡೆ ಮಳೆಯಿಂದ ಜನಜೀವನ ಅಸ್ತವ್ಯಸ್ತವಾದರೆ, ಇನ್ನೊಂದೆಡೆ ವಿದ್ಯುತ್‌ ನಿಲುಗಡೆಯಿಂದ ಜನರು ತೊಂದರೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.