ADVERTISEMENT

ತೋಳಗಳ ದಾಳಿಗೆ 25 ಕುರಿಮರಿಗಳು ಬಲಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 6:35 IST
Last Updated 3 ಜೂನ್ 2017, 6:35 IST
ಲಕ್ಷ್ಮೇಶ್ವರ ಸಮೀಪದ ಶೆಟ್ಟಿಕೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ತೋಳಗಳ ದಾಳಿಗೆ ಸಾವನ್ನಪ್ಪಿರುವ ಕುರಿ ಮರಿಗಳು
ಲಕ್ಷ್ಮೇಶ್ವರ ಸಮೀಪದ ಶೆಟ್ಟಿಕೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ತೋಳಗಳ ದಾಳಿಗೆ ಸಾವನ್ನಪ್ಪಿರುವ ಕುರಿ ಮರಿಗಳು   

ಲಕ್ಷ್ಮೇಶ್ವರ: ಇಲ್ಲಿಗೆ ಸಮೀಪದ ಬಟ್ಟೂರ ಗ್ರಾಮದ ಹೊರವಲಯದಲ್ಲಿ ನಿರ್ಮಿಸಿದ್ದ ಕುರಿದೊಡ್ಡಿ ಮೇಲೆ ತೋಳಗಳು ದಾಳಿ ನಡೆಸಿದ ಪರಿಣಾಮ 25ಕ್ಕೂ ಹೆಚ್ಚು ಕುರಿ ಮರಿಗಳು ಬಳಿಯಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಬಟ್ಟೂರ ಗ್ರಾಮದ ಉಡಚಪ್ಪ ಬೆಟಗೇರಿ ಎಂಬುವವರಿಗೆ ಸೇರಿದ ಕುರಿ ಮರಿಗಳು ತೋಳಗಳ ದಾಳಿಗೆ ಬಲಿಯಾಗಿವೆ ಎಂದು ತಿಳಿದು ಬಂದಿದೆ.

‘ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗಾಗಿ ಗ್ರಾಮಕ್ಕೆ ಹೋಗಿ ಬರುವುದರೊಳಗಾಗಿ ಕುರಿದೊಡ್ಡಿ ಮೇಲೆ ತೋಳಗಳು ದಾಳಿ ನಡೆಸಿ, ಮರಿಗಳನ್ನು ಕೊಂದುಹಾಕಿವೆ. ಇದರಿಂದ ದಿಕ್ಕು ತೋಚದಾಗಿದೆ’ ಎಂದು ಕುರಿ ಹಿಂಡಿನ ಮಾಲೀಕ ಉಡಚಪ್ಪ ಬೆಟಗೇರಿ ಅಲವತ್ತುಕೊಂಡರು.

ADVERTISEMENT

ತೋಳಗಳ ದಾಳಿಯಿಂದ ಬಲಿಯಾಗಿದ್ದ ಕುರಿ ಮರಿಗಳ ಮುಂದೆ ಕುಳಿತು ಉಡಚಪ್ಪ ಗೋಗರೆಯುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.

‘ಕುರಿ ಸಾಕಣಿಕೆಯಿಂದ ಬದುಕು ಸಾಗಿಸುತ್ತಿದ್ದ ಉಡಚಪ್ಪ ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದಾನೆ. ಕುರಿಮರಿ ಕಳೆದುಕೊಂಡಿರುವ ಉಡಚಪ್ಪನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಗ್ರಾಮ ಪಂಚಾಯ್ತಿ ಸದಸ್ಯರಾದ ರಂಗಪ್ಪ ಪೂಜಾರ, ಚೆನ್ನಪ್ಪ ಸೊರಟೂರ, ಪರಸಪ್ಪ ಇಮ್ಮಡಿ, ಮಲ್ಲು ಕಳಸದ ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿ ಎಸ್.ಎಲ್. ವಿಭೂತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.