ADVERTISEMENT

ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 8:35 IST
Last Updated 8 ಫೆಬ್ರುವರಿ 2012, 8:35 IST

ಗಜೇಂದ್ರಗಡ: ಸಾರ್ವಜನಿಕ ಸಮಸ್ಯಗಳಿಗೆ ತ್ವರಿತ ಗತಿಯಲ್ಲಿ ಪುರಸಭೆ ಸಿಬ್ಬಂದಿ ಸ್ಪಂದಿಸಬೇಕು ಎಂದು ಪುರಸಭೆ ಸ್ಧಾಯಿ ಸಮಿತಿ ಅಧ್ಯಕ್ಷ ಚಂದ್ರು ಚಳಗೇರಿ ಹೇಳಿದರು.

ಇತ್ತೀಚೆಗೆ ಪುರಸಭೆ ಸಭಾ ಭವನದಲ್ಲಿ ನಡೆದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿದ ಅವರು. ಇತ್ತೀಚಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯಲ್ಲಿನ 23 ವಾರ್ಡ್‌ಗಳ ನಾಗರಿಕರ ಕುಂದು ಕೊರತೆಗಳ ನಿವಾರಣೆ ಕುರಿತು ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ಈ ನಿಟ್ಟಿನಲ್ಲಿ ಜನರ ಸಮಸ್ಯೆ ನಿವಾರಣೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಕಟ್ಟಡ ಪರವಾನಗಿ, ಖಾತಾ ಬದಲಾವಣೆ, ಪಹಣಿ ನೀಡಲು ಅಧಿಕಾರಿಗಳು ಅನುಸರಿಸುತ್ತಿರುವ ವಿಳಂಬ ಧೋರಣೆ ಕುರಿತು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಮುಂದಿನ 15 ದಿನಗಳಲ್ಲಿ ಪುರಸಭೆ ವ್ಯಾಪ್ತಿಯಲ್ಲಿನ ಎಲ್ಲ ಪ್ರಕರಣಗಳನ್ನು ಕಾರ್ಯಗತಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವಂತೆ  ತಿಳಿಸಿದರು.

15 ದಿನಕ್ಕೊಂದು ಸಭೆ: ನಾಗರಿಕರ ಅನುಕೂಲತೆಯ ದೃಷ್ಟಿಯಿಂದಾಗಿ ಪ್ರತಿ ಹದಿನೈದು ದಿನಕ್ಕೊಮ್ಮೆ ಸ್ಧಾಯಿ ಸಮಿತಿ ಸಭೆ ಕಡ್ಡಾಯವಾಗಿಗೊಳಿಸಲಾಗಿದ್ದು, ಈ ಸಭೆಯಲ್ಲಿ ಎಲ್ಲ ಹಂತದ ಪ್ರಗತಿಯನ್ನು ಪರಿಶೀಲಿಸಲಾಗುವುದು ಎಂದರು. 

ಪುರಸಭೆ ಅಧ್ಯಕ್ಷೆ ಶ್ರೀಮತಿ ದೇವಕ್ಕ ಬೆಳವಣಿಕಿ ಮಾತನಾಡಿ, ಶುದ್ದ ಕುಡಿಯುವ ನೀರು, ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಅಧಿಕಾರಿಗಳು ಉದಾಸೀನತೆ ತೋರದೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ಸಾರ್ವಜನಿಕರಿಗೆ ತೊಂದರೆ ಉಂಟಾಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಎಂಬ ಸಲಹೆ ನೀಡಿದರು.

ಉಪಾಧ್ಯಕ್ಷ ಭಾಸ್ಕರ ರಾಯಬಾಗಿ ಮಾತನಾಡಿ, 2010-11 ನೇ ಸಾಲಿನ ಶೇ.7.25 ದರ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುವಂತೆ ಸೂಚಿಸಿದರು.

ಸಭೆ ಮುಖ್ಯಾಧಿಕಾರಿ ಆರ್.ಎಂ.ಕೊಡುಗೆ, ಆರೋಗ್ಯಾಧಿಕಾರಿ ಎಂ.ಬಿ.ನಿಡಶೇಸಿ, ಜಿ.ಎನ್.ಕಾಳೆ, ಕಡೆತೋಟದ, ಅಭಿಯಂತರ ಕೊಂಗವಾಡ, ಮುಲ್ಲಾ, ಸಿ.ಡಿ.ದೊಡ್ಡಮನಿ, ಪೂಜಾರ, ನಾವಳ್ಳಿ, ಗದಗಿನ  ಉಪಸ್ಧಿತರಿದ್ದರು.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.