ADVERTISEMENT

ದುಶ್ಚಟ ತೊರೆಯಲು ಯುವಕರಿಗೆ ಸಲಹೆ

ಡಂಬಳದಲ್ಲಿ ಜಂಗಿ ನಿಕಾಲಿ ಕುಸ್ತಿಗೆ ಚಾಲನೆ; ಬಸವ ಜಯಂತಿ ಅಂಗವಾಗಿ ಏರ್ಪಾಡು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 8:36 IST
Last Updated 21 ಏಪ್ರಿಲ್ 2018, 8:36 IST

ಡಂಬಳ: ಪುರಾತನ ಕಾಲದಿಂದಲೂ ರಾಜ ಮಹಾರಾಜರ ಆಸ್ಥಾನದಲ್ಲಿ ಕುಸ್ತಿಗಾಗಿ ವಿಶೇಷ ಸ್ಪರ್ಧೆಗಳನ್ನು ಆಯೋಜನೆ ಮಾಡುತ್ತಿದ್ದರು. ಆದರೆ ಇಂದು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಅವು ಕಡಿಮೆ ಆಗುತ್ತಿದೆ ಎಂದು ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಅಭಿಪ್ರಾಯಪಟ್ಟರು.

ಡಂಬಳದ ಧರ್ಮಪುರ ವಂಟಾಲಯ ಮಾರುತೇಶ್ವರ ಕುಸ್ತಿ ಸಂಘ, ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು ಬಸವ ಜಯಂತಿ ಅಂಗವಾಗಿ ತೋಂಟದಾರ್ಯ ಕಲಾ ಭವನದ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ಪುರುಷರ ಜಂಗಿ ನಿಕಾಲಿ ಕುಸ್ತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ 130 ಕೋಟಿ ಜನಸಂಖ್ಯೆಯಲ್ಲಿ ಬೆರಳೆಣಿಕೆಯಷ್ಟು ಕುಸ್ತಿಪಟುಗಳಿದ್ದಾರೆ. ಪೈಲವಾನರನ್ನು ತಯಾರು ಮಾಡುತ್ತಿದ್ದ ಗ್ರಾಮೀಣ ಪ್ರದೇಶದಲ್ಲಿನ ಗರಡಿ ಮನೆಗಳು ಮಾಯವಾಗುತ್ತಿವೆ. ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ADVERTISEMENT

ಹಿರಿಯ ಕುಸ್ತಿಪಟುಗಳಾದ ಮರಿತೆಮ್ಮಪ್ಪ ಆದಮ್ಮನವರ ಮಾತನಾಡಿ, ‘ನಮ್ಮ ಊರು ಕ್ರೀಡೆ, ಕಲೆ, ಸಂಗೀತ ನಾಟಕ ಮುಂತಾದ ಕ್ಷೇತ್ರದಲ್ಲಿ ಪ್ರಾಮುಖ್ಯ ಹೊಂದಿದೆ. ಮಕ್ಕಳು ದೈಹಿಕ ಮಾನಸಿಕವಾಗಿ ಸದೃಢರಾದಾಗ ಮನಸ್ಸು ಏಕಾಗ್ರತೆಯಿಂದ ಕೂಡಿರುತ್ತದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಸವರಾಜ ಪೂಜಾರ, ಕುಬೇರಪ್ಪ ಕೊಳ್ಳಾರ, ಸಣ್ಣಹನಮಪ್ಪ ಬಂಡಿ, ಯಂಕಪ್ಪ ಪೂಜಾರ ಮಂಜುನಾಥ ಸಂಜೀವಣ್ಣನವರ, ಬಸವರಾಜ ಮಲ್ಲಾಪೂರ, ಶರಣಪ್ಪ ಬೇಲೇರಿ, ದೇವಪ್ಪ ಗಡಾದ, ಮಹ್ಮದ್ ಗೌಸ್ ತಾಂಬೋಟಿ, ಚಂದ್ರಶೇಖರ ಗಡಗಿ, ಅಮರಪ್ಪ ಗಡಗುಂಟಿ, ರುದ್ರಪ್ಪ ಏಣಗಿ, ಕುಮಾರ ಮಾನೆ, ಬಸಪ್ಪ ಸೂರಟೂರ, ವಿರೂಪಾಕ್ಷಪ್ಪ ಯಲಿಗಾರ, ಸಿ.ಆರ್ ಹಿರೇಮಠ, ನಟರಾಜ ಬಳ್ಳಾರಿ, ಜಂಧಿಸಾಬ ಸರ್ಕವಾಸ, ಮಳ್ಳಪ್ಪ ಜೊಂಡಿ, ಶಂಕ್ರಪ್ಪ ಗಡಗಿ, ಬಾಬುಸಾಬ ಸರ್ಕವಾಸ, ಮುರ್ತುಜಾ ಮನಿಯಾರ, ಭೀಮಪ್ಪ ಕರಡ್ಡಿ, ಬಾಲಪ್ಪ ನರಗುಂದ, ಬಾಬುಸಾಬ ಅತ್ತಾರ ಇದ್ದರು.

ಬೆಳಗಾವಿ, ಘಟಪ್ರಭಾ, ಕರಡ್ಡಿಕೊಪ್ಪ, ವಿಜಯಪುರ, ಹುಬ್ಬಳ್ಳಿ, ಲಕ್ಕುಂಡಿ, ಹಡಗಲಿ, ಗದಗ, ಹಾತಲಗೇರಿ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ಕುಸ್ತಿಪಟುಗಳು ಪಾಲ್ಗೊಂಡಿದ್ದರು.

**

ಸದೃಢ ದೇಹದಲ್ಲಿ ಸದೃಢ ಮನಸ್ಸು ನಿರ್ಮಾಣವಾಗಬೇಕಾದರೆ ಯುವಕರು ವಿದ್ಯಾರ್ಥಿಗಳು ಸಾವಯವ ಆಹಾರವನ್ನು ಸೇವನೆ ಮಾಡಬೇಕು – ಜಿ.ವಿ. ಹಿರೇಮಠ, ವ್ಯವಸ್ಥಾಪಕ, ತೋಂಟದಾರ್ಯ ಮಠ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.