ADVERTISEMENT

ನನ್ನ ನಡೆ ಕೆಜೆಪಿಯೆಡೆಗೆ: ಬಿದರೂರ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 9:15 IST
Last Updated 8 ಡಿಸೆಂಬರ್ 2012, 9:15 IST

ಗದಗ: `ನನ್ನ ನಡೆ ಕೆಜೆಪಿಯೆಡೆಗೆ'.... ಹೀಗೆ ಹೇಳಿದವರು ಗದಗ ಕ್ಷೇತ್ರದ ಬಿಜೆಪಿ ಶಾಸಕ ಶ್ರೀಶೈಲಪ್ಪ ಬಿದರೂರ. ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ಜನತಾ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಪುಟ್ಟರಾಜ ಗವಾಯಿಗಳ ಸ್ಮಾರಕಕ್ಕೆ ಎಂಟು ಕೋಟಿ ರೂಪಾಯಿ ನೀಡಿದ್ದಾರೆ.

ತಾಂತ್ರಿಕವಾಗಿ ಬಿಜೆಪಿ ಯಲ್ಲಿದ್ದೇನೆ. ನನ್ನ ನಡೆ ಯಡಿಯೂರಪ್ಪ ಹುಟ್ಟು ಹಾಕಿದ ಕೆಜೆಪಿಯೆಡೆಗೆ ಎಂದು ಸ್ಪಷ್ಟ ಪಡಿಸಿದ ಅವರು, ಇದೇ 9 ರಂದು ಹಾವೇರಿಯಲ್ಲಿ ನಡೆಯುವ ಸಮಾವೇಶಕ್ಕೆ ಹೋಗಿ ಶುಭ ಹಾರೈಸುತ್ತೇನೆ ಎಂದರು.

ಜಿಲ್ಲೆಯಿಂದ ಮೂವರು ಶಾಸಕರು ಕೆಜೆಪಿಗೆ ಸೇರುವ ಸಾಧ್ಯತೆ ಇದೆ. ಅಲ್ಲದೆ ಮತ್ತಷ್ಟು ಮಂದಿ ಸೇರುವ ವಿಶ್ವಾಸ ಇದೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಜು ಕುರುಡಗಿ  ನೇತೃತ್ವದಲ್ಲಿ  ಸದು ಮದರೀಮಠ, ಸಿದ್ದಣ್ಣ ಮಾರನಬಸರಿ, ಅಜ್ಜಣ್ಣ ಗುಗ್ರಿ, ಮುತ್ತು ಕಾರದಕಟ್ಟಿ, ಇರ್ಶಾದ ಮಾನ್ವಿ, ಬನ್ನೂರ. ವೀರಪ್ಪ ಹತ್ತಿಶೆಟ್ಟರ, ಕೆ.ಪಿ.ಗುಳಗೌಡ್ರ, ಬಸವರಾಜ ಅಂಗಡಿ, ಸಂಗಮೇಶ ಗದಗ, ಅಮರೇಶ ಅಂಗಡಿ, ವಿಜಯಕುಮಾರ ಹಿರೇಮಠ, ಸಂತೋಷ ಮೇಲಗಿರಿ, ಗಂಗಾಧರ ಮೇಲಗಿರಿ, ಲಿಂಗರಾಜ ಗುಡಿಮನಿ, ಮಲ್ಲು ಪಟ್ಟಣಶೆಟ್ಟಿ, ಗುರು ತಡಸದ, ರಜಾಕ್ ಡಂಕೇದ, ಫೈಜಲ್, ವಿ .ಕೆ.ಗುರುಮಠ, ವಿರೂಪಣ್ಣ ಬಳ್ಳೊಳ್ಳಿ, ಕೆ.ಸಿ.ಪಾಟೀಲ, ಸಿದ್ದು ಹಿಡಕಿಮಠ, ಬಿ.ಬಿ.ಸಂಕನಗೌಡ್ರ, ಗೌತಮ ಜೈನ್, ಹರೀಶ ಶಹಾ, ಶ್ರೀಕಾಂತ ಅಂಗಡಿ, ಪ್ರಭುದೇವ ಹಿರೇಮಠ, ರಾಮಣ್ಣ ಕೊಡ್ಲಿ, ಬಸವರಾಜ ಹಿರೇಹಡಗಲಿ ಸೇರಿದಂತೆ ಹಲವು ಮಂದಿ ಸೇರ್ಪಡೆಯಾದರು.

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿ, ಸಮಾವೇಶದಲ್ಲಿ 5-6 ಲಕ್ಷ ಜನ ಭಾಗವಹಿಸಲಿದ್ದು, 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಾಗುವುದು ಎಂದರು.  ಅಶೋಕ ನಿಡುವಣಿ, ಮುತ್ತಣ್ಣ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮೆಹಬೂಬ ಸಾಬ್ ಹಾಜರಿದ್ದರು.

`ಕೆಜೆಪಿ ಸಮಾವೇಶದಲ್ಲಿ ಭಾಗವಹಿಸಬೇಡಿ'
ಗದಗ:
ಕಮಲದ ಚಿಹ್ನೆ ಮೇಲೆ ಗೆದ್ದು ಬಂದಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ಕಾರ್ಯಕರ್ತರು ಮತ್ತೊಂದು ಪಕ್ಷದ ಸಭೆ ಮತ್ತು ಸಮಾರಂಭಗಳಲ್ಲಿ ಭಾಗವಹಿಸದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್‌ಕರಿಗೌಡ್ರ ಮನವಿ ಮಾಡಿದ್ದಾರೆ.

ನಗರದಲ್ಲಿ ಶುಕ್ರವಾರ ಕೆಜೆಪಿಗೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ನಡೆದ ಬೆನ್ನೆಲ್ಲೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜಕೀಯ ಸಂಕ್ರಮಣದ ಕಾಲವಾಗಿರುವುದರಿಂದ ಕಾರ್ಯ ಕರ್ತರೆಲ್ಲರೂ ಸಂಯಮದಿಂದ ಸಮಧಾನದಿಂದ ವರ್ತಿಸಿದರೆ ಮುಂದಿನ ದಿನಮಾನಗಳಲ್ಲಿ ಬಿಜೆಪಿ ಪ್ರಬಲ ಶಕ್ತಿಯಾಗಿ ರಾಷ್ಟ್ರ ಮಟ್ಟದಲ್ಲಿ ಚುಕ್ಕಾಣಿ ಹಿಡಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ  ಹಾಗೂ ಪಿ.ಸಿ.ಗದ್ದಿಗೌಡರ ನೇತೃತ್ವದಲ್ಲಿ ಪಕ್ಷ ಬಲಪಡಿಸೋಣ ಎಂದು ಈ ಸಂದರ್ಭದಲ್ಲಿ ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT