ADVERTISEMENT

ನೀರಿಗಾಗಿ ನೀರೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 5:56 IST
Last Updated 11 ಜನವರಿ 2014, 5:56 IST
ಕುಡಿಯುವ ನೀರಿಗೆ ಆಗ್ರಹಿಸಿ ಗದಗ ಬೆಟಗೇರಿ ಭಾಗದ ಕನ್ಯಾಳ ಅಕ್ಕಿ ಓಣಿ ಮಹಿಳೆಯರು ಶನಿವಾರ ರಸ್ತೆತಡೆ ನಡೆಸಿದರು.
ಕುಡಿಯುವ ನೀರಿಗೆ ಆಗ್ರಹಿಸಿ ಗದಗ ಬೆಟಗೇರಿ ಭಾಗದ ಕನ್ಯಾಳ ಅಕ್ಕಿ ಓಣಿ ಮಹಿಳೆಯರು ಶನಿವಾರ ರಸ್ತೆತಡೆ ನಡೆಸಿದರು.   

ಗದಗ: ಕುಡಿಯುವ ನೀರಿಗೆ ಆಗ್ರಹಿಸಿ ಬೆಟಗೇರಿ ಭಾಗದ ಕನ್ಯಾಳ ಅಕ್ಕಿ ಓಣಿ ಮಹಿಳೆಯರು ಶನಿವಾರ ರಸ್ತೆತಡೆ ನಡೆಸಿದರು.
ನಗರದ ಕನ್ಯಾಳ ಅಕ್ಕಿ ಓಣಿಯ ಮಹಿಳೆಯರು ಬೆಳಿಗ್ಗೆ ಖಾಲಿ ಕೊಡ­ಗಳನ್ನು ಪ್ರದರ್ಶಿಸಿ ರಸ್ತೆತಡೆ ನಡೆಸಿ, ನಗರಸಭೆ ಅಧಿಕಾರಿಗಳು ಮತ್ತು ನಗರಸಭೆ ಸದಸ್ಯೆ ವಿರುದ್ಧ ಘೋಷಣೆ­ಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಇಪ್ಪತ್ತು ದಿನಗಳಿಂದ ಕುಡಿ­ಯಲು ತುಂಗಾಭದ್ರ ನೀರು ಬಿಟ್ಟಿಲ್ಲ.  ಸವಳು ನೀರು ಸಹ ಬಂದ್‌ ಮಾಡಲಾಗಿದೆ. ಹೀಗಾಗಿ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ.  ವಾರ್ಡ್‌ ಸದಸ್ಯೆ ಮಂಜುಳಾ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸವಳು ನೀರನ್ನು ಮೂರು ಕಿ.ಮೀ. ದೂರದಿಂದ ತರಬೇಕು. ಪುರುಷರು ಕೂಲಿಗಾಗಿ ಹೊರಗೆ ಹೋಗುತ್ತಾರೆ. ಮಹಿಳೆಯರೇ ದೂರದ ಪ್ರದೇಶದಿಂದ ನೀರು ತರಬೇಕಾಗಿದೆ ಎಂದು ಪ್ರತಿಭಟ­ನಾಕಾರರು ಅಳಲು ತೋಡಿಕೊಂಡರು.

ನೀರು ಬಿಡುವಂತೆ ನಗರಸಭೆ ಅಧಿಕಾರಿಯನ್ನು ಪ್ರಶ್ನಿಸಿದರೆ ಸರಿಯಾದ ಉತ್ತರ ನೀಡುವುದಿಲ್ಲ. ಗಾರಗಿ­ಪೇಟೆಯಲ್ಲಿ ಮೋಟಾರು ಕೆಟ್ಟಿದ್ದು, ದುರಸ್ತಿಯಾಗುವವರೆಗೆ ಕಾಯಬೇಕು ಎಂಬ ಉತ್ತರ ನೀಡುತ್ತಾರೆ. ನೀರು ಇಲ್ಲದೆ ದಿನನಿತ್ಯದ ಚುಟವಟಿಕೆಗಳಿಗೆ ಸಾಕಷ್ಟು ತೊಂದರೆಯಾಗಿದೆ. ಎಂಟು ದಿನಕ್ಕೆ ಪೂರೈಸುತ್ತಿದ್ದ ಕುಡಿಯುವ ನೀರು ಸಹ ಬಂದ್‌ ಮಾಡಲಾಗಿದೆ ಎಂದು ನಿವಾಸಿ ಅಬ್ದುಲ್‌ ತಿಳಿಸಿದರು.

ನಗರಸಭೆ ಎಂಜಿನಿಯರ್‌ ಪತ್ತಾರ ಅವರು ಸಂಜೆ ವೇಳೆಗೆ ನೀರು ಪೂರೈಸುವ ಭರವಸೆ ನೀಡಿದ ಬಳಿಕ ನಿವಾಸಿಗಳು ಪ್ರತಿಭಟನೆ ಹಿಂತೆಗೆದು­ಕೊಂಡರು. ಬೇಡಿಕೆ ಈಡೇರಿಸದಿದ್ದರೆ ಮತ್ತೆ ಹೋರಾಟ ಮಾಡಲಾಗುವುದು ಎಂದು ನಿವಾಸಿಗಳು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ನಿವಾಸಿಗಳಾದ ಸಾಯಿರಾಬಾನು, ಫಾತಿಮಾ, ಹುಣಸಿಮರದ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT