ADVERTISEMENT

ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 6:50 IST
Last Updated 8 ಅಕ್ಟೋಬರ್ 2011, 6:50 IST

ಮುಂಡರಗಿ: `ಶಾಲೆಯಲ್ಲಿ ಕೇವಲ ಹೆಚ್ಚು ಅಂಕಗಳನ್ನು ಪಡೆದುಕೊಂಡ ಮಾತ್ರಕ್ಕೆ ಯಾವ ಮಗುವು ಬುದ್ಧಿವಂತನಾಗುವುದಿಲ್ಲ. ಪಠ್ಯದ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ನಾಟಕ ಮೊದಲಾದ ವಿವಿಧ ರಂಗಗಳಲ್ಲಿ ತೊಡಗುವ ಮಗು ಮಾತ್ರ ಎಲ್ಲ ರೀತಿಯಲ್ಲೂ ಮುಂದೆ ಬರಬಹುದು ~ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬೀರಪ್ಪ ಬಂಡಿ ಹೇಳಿದರು.

ತಾಲ್ಲೂಕು ಜವಾಹರ ಬಾಲ ಭವನ ಸಮಿತಿಯು ಇಲ್ಲಿಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಮಕ್ಕಳ ಕಲಾ ಉತ್ಸವ ಹಾಗೂ ಕಲಾಶ್ರಿ ಪ್ರಶಸ್ತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಸುಪ್ತವಾಗಿರುವ ಮಕ್ಕಳ ಕಲೆಯನ್ನು ಹೊರ ಹಾಕಲು ಮಕ್ಕಳ ಕಲಾ ಉತ್ಸವವು ಒಂದು ಅತ್ಯುತ್ತಮ ವೇದಿಕೆಯಾಗಿದ್ದು ಮಕ್ಕಳು ಹಾಗೂ ಪಾಲಕರು ಇದನ್ನು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳ ಪ್ರತಿಬೆಯನ್ನು ಇತರರಿಗೆ ಪರಿಚಯಿಸಬೇಕು~ ಎಂದು ಅವರು ಸಲಹೆ ನೀಡಿದರು.

`ಎಲ್ಲ ಮಕ್ಕಳಲ್ಲಿಯೂ ಒಂದು ವಿಶಿಷ್ಟವಾದ ಕಲೆ ಅಡಗಿರುತ್ತದೆ. ಮಕ್ಕಳಿಗೆ ತಮ್ಮ ಪ್ರತಿಭೆ ತೋರಿಸಲು ರಾಜ್ಯ ಹಾಗೂ ಕೇಂದ್ರ ಸರಕಾರದಲ್ಲಿ ಹಲವು ವೇದಿಕೆಗಳಿವೆ. ಅಲ್ಲಿ ಮಕ್ಕಳು ಮತ್ತು ಪಾಲಕರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು~ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಸಲಹೆ ನೀಡಿದರು.

ಜಿ.ಪಂ. ವಿರೋಧ ಪಕ್ಷದ ನಾಯಕ ಹೇಮಗಿರಶ ಹಾವಿನಾಳ, ಬಿಜೆಪಿ ಅಧ್ಯಕ್ಷ ಕೆ.ವಿ. ಹಂಚಿನಾಳ, ಪುರಸಭೆ ಉಪಾಧ್ಯಕ್ಷ ಶಿವನಗೌಡ್ರ ಗೌಡ್ರ, ತಹಸೀಲ್ದಾರ್ ರಮೇಶ ಕೋನರಡ್ಡಿ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ರಿಹಾನಾಬೇಗಂ ಕೆಲೂರ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಿಡಿಪಿಒ ಎಸ್.ಎಸ್. ವಾರದ ಪ್ರಾಸ್ತಾವಿಕವಾಗಿ ಮತನಾಡಿದರು. ಅಶೋಕ ಗೋಡ್ಖಿಂಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.