ರೋಣ: ಕಳೆದ 15 ದಿನಗಳಿಂದ ಶಾಲಾ ಕಾಲೇಜು ಪ್ರವೇಶ ಆರಂಭವಾಗುತ್ತಿದಂತೆ ಅಟಲ್ಜಿ ಜನಸ್ನೇಹಿ ಸೇವಾ ಕೇಂದ್ರಕ್ಕೆ ವಿದ್ಯಾರ್ಥಿಗಳು, ಪಾಲಕರು ಮುಗಿಬಿದ್ದಿದ್ದು, ಪ್ರಮಾಣ ಪತ್ರ ಪಡೆಯಲು ಪರದಾಡುವಂತಾಗಿದೆ.
ಎಲ್ಲವೂ ಕಂಪ್ಯೂಟರೀಕರಣ, ಆನ್ಲೈನ್ ವ್ಯವಸ್ಥೆಯಿಂದ 25 ಕಂದಾಯ ಇಲಾಖೆಗಳ ಸೇವೆಯಲ್ಲಿರುವ ಶಾಲೆ ಕಾಲೇಜು ಜಾತಿ, ಆದಾಯ ಪತ್ರಕ್ಕಾಗಿ ಹಾಗೂ ಸಾಮಾಜಿಕ ಭದ್ರತೆಯ ಸೌಲಭ್ಯಕ್ಕಾಗಿ ಇಲ್ಲಿನ ಹಳೆಯ ತಹಶೀಲ್ದಾರ್ ಕಾರ್ಯಾಲದ ಹಿಂದೆ ಗಂಟೆ ಗಟ್ಟಲೆ ಸಾಲುಗಟ್ಟಿ ನಿಂತರೂ ಪ್ರಮಾಣ ಪತ್ರಗಳು ಸಿಗದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಸಾಲುಗಟ್ಟಿ ನಿಂತರೂ ಅರ್ಜಿ ಸ್ವೀಕರಿಸದ ಸಿಬ್ಬಂದಿ ಮೇಲೆ ಹರಿಹಾಯುತ್ತಿರುವ ವಿದ್ಯಾರ್ಥಿಗಳು, ನಮ್ಮ ಭವಿಷ್ಯ ಹಾಳು ಮಾಡಬೇಡಿ. ವಿಳಂಬ ಮಾಡಿದರೆ ಶಾಲಾ ಕಾಲೇಜುಗಳಲ್ಲಿ ಸೀಟು ಸಿಗುವುದಿಲ್ಲ ಎಂದು ಒತ್ತಾಯಿಸುತ್ತಿದ್ದಾರೆ.
`ಪಟ್ಟಣದಲ್ಲಿ ಅಟಲ್ಜಿ ಸೇವಾ ಕೇಂದ್ರ ಒಂದೇ ಇದ್ದು, ಸಿಬ್ಬಂದಿಯೂ ಕಡಿಮೆ ಇದ್ದಾರೆ. ಕೇಂದ್ರಕ್ಕೆ ಒಂದೇ ಸಾಫ್ಟ್ವೇರ್ ಇರುವ ಕಾರಣ ಆಗಾಗ ಸರ್ವರ್ ಸಮಸ್ಯೆಯಿಂದ ಆನ್ಲೈನ್ ವ್ಯವಸ್ಥೆ ನಿಂತು ಹೋಗಿ ಸಾರ್ವಜನಿಕರ ಸೇವೆ ಸ್ಥಗಿತಗೊಳ್ಳುತ್ತದೆ. ಆದರೆ ಈ ವಿಷಯ ಜನರಿಗೆ ಅರ್ಥವಾಗದೇ ಸುಮ್ಮನೆ ದಾಂಧಲೆ ಮಾಡುತ್ತಿದ್ದಾರೆ' ಎಂದು ಕೇಂದ್ರದ ಸಿಬ್ಬಂದಿ ತಮ್ಮ ನೋವು ತೋಡಿಕೊಂಡರು.
`ಯಪ್ಪಾ ನನ್ನ ಮೊಮ್ಮಗ ಬದಾಮಿಯೊಳಗ ಶಾಲೆಗೆ ಹೆಸರು ಹಚ್ಚಿವ್ರಿ. ಅದಕ್ಕ ತಹಶೀಲ್ದಾರ್ ಸಾಹೇಬ್ರ ಪತ್ರ ಬೇಕಂತರ್ರೀ. ಮುಂಜಾನೆ 6 ಗಂಟೆಯಿಂದ ಸಾಲುಗಟ್ಟಿ ನಿಂತಿದ್ದೇನೆ. ಮಧ್ಯಾಹ್ನ ಆದರೂ ನನ್ನ ಪಾಳಿ ಬಂದಿಲ್ಲರ್ರಿ ಯಪ್ಪಾ. ಶಾಲೆ ಕಲಿಯುವ ಸಣ್ಣ ಹುಡಗರಿಗೆ ಪತ್ರ ಕೊಡೋದಿಲ್ಲಾಂತ ಹೇಳಿ ಕಳಸ್ಯಾರೆ ಅದಕ್ಕ ನಾನ ಬಂದಿನ್ರೀ' ಎಂದು ಎಂದು ವೃದ್ಧೆ ಯಲ್ಲಮ್ಮ ಡೊಳ್ಳಿನ ತಿಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.