ADVERTISEMENT

ಬಸ್ ಸಂಚಾರ ಕಲ್ಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 11:00 IST
Last Updated 19 ಜನವರಿ 2011, 11:00 IST

ಲಕ್ಷ್ಮೇಶ್ವರ: ಪಟ್ಟಣದಿಂದ ಐದಾರು ಕಿ.ಮೀ. ದೂರದಲ್ಲಿರುವ ಗುಲಗಂಜಿಕೊಪ್ಪ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಲಕ್ಷ್ಮೇಶ್ವರದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.ಗ್ರಾಮದಿಂದ ನಿತ್ಯವೂ ರೈತರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ವಿವಿಧ ಕೆಲಸ ಕಾರ್ಯಗಳಿಗಾಗಿ ಲಕ್ಷ್ಮೇಶ್ವರ ಹಾಗೂ ಯಲವಗಿಗೆ ಸಂಚಾರ ಮಾಡುತ್ತಾರೆ.

ಅಲ್ಲದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಲುವಾಗಿ ಬೇರೆ ಊರಿಗೆ ಹೋಗುತ್ತಾರೆ. ಆದರೆ ಇವರೆಲ್ಲರ ಪ್ರಯಾಣಕ್ಕಾಗಿ ಇಲ್ಲಿ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣಕ್ಕಾಗಿ ದಿನಾಲೂ ಗ್ರಾಮದ ಹತ್ತಾರು ವಿದ್ಯಾರ್ಥಿಗಳು ಲಕ್ಷ್ಮೇಶ್ವರಕ್ಕೆ ಬರುತ್ತಾರೆ. ಇದಕ್ಕಾಗಿ ಇವರು ಮಾಸಿಕ ಪಾಸುಗಳನ್ನೂ ಪಡೆದುಕೊಂಡಿದ್ದಾರೆ. ಆದರೆ ಬಸ್ ಸೌಲಭ್ಯ ಇಲ್ಲದೆ ಅವರು ಪರದಾಡುತ್ತಿದ್ದಾರೆ.
 
ಕೆಲವೊಂದು ಸಲ ವಿದ್ಯಾರ್ಥಿಗಳು ನಡೆದೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆಯೂ ನಿರ್ಮಾಣವಾಗುತ್ತಿದೆ. ಅಲ್ಲದೆ ಕ್ರಾಸ್ ಹತ್ತಿರ ಹೆಚ್ಚಾಗಿ ಬಸ್ ನಿಲುಗಡೆ ಆಗುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೀವ್ರ ಹೊಡೆತ ಬಿದ್ದಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.ಗ್ರಾಮದಿಂದ ಬೇರೆ ಊರಿಗೆ ದುಡಿಯಲು ಹೋಗಿ ಬರುವ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಬಸ್ ಸೌಲಭ್ಯ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
 
ಬಸ್ ಅವ್ಯವಸ್ಥೆ ಕುರಿತು ಅನೇಕ ಬಾರಿ ಘಟಕ ವ್ಯವಸ್ಥಾಪಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಬಸ್ ಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರಾಸ್ತಾರೋಖೊ ಮಾಡಲಾಗುವುದು ಎಂದು ಗ್ರಾಮ ಪಂಚಾಯ್ತಿ ಸದಸ್ಯ ನಿಂಗನಗೌಡ ಪಾಟೀಲ, ಬಸಪ್ಪ ಮಾದರ, ರಾಮನಗೌಡ ಪಾಟೀಲ, ಗುಡ್ಡಪ್ಪ ತಿಮ್ಮಾಪುರ, ಎನ್.ಎನ್. ದುರಗನಗೌಡ್ರ, ದುಂಡಪ್ಪ ಉಳ್ಳಟ್ಟಿ, ಅಣ್ಣಪ್ಪ ರಾಮಗೇರಿ, ದಿಲ್ಲೆಪ್ಪ ಉಳ್ಳಟ್ಟಿ, ಬಸಪ್ಪ ಪೂಜಾರ, ಎಂ.ಎನ್. ಶಿವಬಸಣ್ಣನವರ ಸೇರಿದಂತೆ ಮತ್ತಿತರರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.