ADVERTISEMENT

ಮಕ್ಕಳ ಹಕ್ಕು: ಜಾಗೃತಿ ಅವಶ್ಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 9:05 IST
Last Updated 22 ಜನವರಿ 2011, 9:05 IST

ಹಾವೇರಿ: ‘ಮಕ್ಕಳ ಹಕ್ಕುಗಳ ಕುರಿತು ಪ್ರಾಥಮಿಕ ಹಂತದಲ್ಲಿ ಅರಿವು ಮೂಡಿಸಬೇಕು.  ಪಾಲಕರಲ್ಲಿ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ’ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ರಾಜ್ಯ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ ಜಿಲ್ಲಾ ಘಟಕ ಹಾಗೂ  ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ನಗರದ ನೌಕರರ ಭವನದಲ್ಲಿ ಈಚೆಗೆ ನಡೆದ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಬಾಲ್ಯ ವಿವಾಹ ತಡೆ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಮಠ ಮತ್ತು ನಾಗರಿಕ ಸಂಸ್ಥೆಗಳ ಪಾತ್ರ ಹಿರಿದಾಗಿದೆ. ಮಕ್ಕಳ ಬೆಳವಣೆಗೆಯಲ್ಲಿ ಮತ್ತು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ಪೋಷಕರು ಮತ್ತು ಸಮಾಜ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಬಾಲ್ಯವಿವಾಹ ಮಕ್ಕಳ ಮೇಲೆ ನಡೆಯುವ ನೇರ ದೌರ್ಜನ್ಯವಾಗಿದೆ ಎಂದರು.

ರಾಜ್ಯ ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂಧೋಲನದ ಸಂಚಾಲಕ ಗಂಗಾಧರ ರೆಡ್ಡಿ .ಎನ್, ಬಾಲ್ಯ ವಿವಾಹ ತಡೆಗೆ ಇರುವ ಕಾನೂನು, ಅವುಗಳನ್ನು ಇಂದಿನ ಸರ್ಕಾರ ಮತ್ತು ಅಧಿಕಾರಿಗಳು ಬಳಸಿಕೊಳುತ್ತಿರುವ ರೀತಿ ಮತ್ತು ಈ ಪದ್ಧತಿಗಳನ್ನು ತಡೆಯುವಲ್ಲಿ ಸಮುದಾಯ ಮತ್ತು ಸಾಮಾನ್ಯ ನಾಗರಿಕನ ಪಾತ್ರ ಮಹತ್ವದಾಗಿದೆ ಎಂದರು

ಜಿಲ್ಲಾ ಸಂಚಾಲಕ ಮತ್ತು ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಎಸ್.ಎಚ್. ಮಜೀದ್, ಎಮ್.ಎನ್. ಮಾಳಗೇರ್ ಮಾತನಾಡಿ, ಇಂದಿನ ಮಕ್ಕಳು ನಾಳಿನ ನಾಗರಿಕರು. ಅವರಿಗೆ ಯೋಗ್ಯ ಶಿಕ್ಷಣ ನೀಡಬೇಕಾದುದು ಅವಶ್ಯ. ಗುಣಮಟ್ಟದ ಶಿಕ್ಷಣವನ್ನು ನೀಡಲು ಶಿಕ್ಷಕರು ಶ್ರಮ ವಹಿಸಬೇಕು. ಪಾಲಕರೂ ತಮ್ಮ ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಕಾಳಜಿ ವಹಿಸಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣದ ಕನಸು ನನಸಾಗುತ್ತದೆ ಎಂದು ಹೇಳಿದರು.

ಸ್ಪಂದನ ಸಂಸ್ಥೆಯ ಪ್ರಸನ್ನ ಉಪಸ್ಥಿತರಿದ್ದರು. ಫಕ್ಕಿರೇಶ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.