ADVERTISEMENT

ಮಠಗಳು ಧರ್ಮ ಜಾಗೃತಿ ಕೇಂದ್ರಗಳಾಗಬೇಕು

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 7:50 IST
Last Updated 19 ಜನವರಿ 2012, 7:50 IST

ನರಗುಂದ: ಪ್ರಸ್ತುತ ಸಮಾಜದಲ್ಲಿ ಅಶಾಂತಿ, ಅನೀತಿ ತುಂಬಿ ತುಳು ಕಾಡುತ್ತಿದೆ. ಅದನ್ನು ಹೋಗ ಲಾಡಿಸುವಲ್ಲಿ ಮಠಗಳ, ಮಠಾಧೀಶರ  ಪ್ರಯತ್ನ ಬಹಳ ಮುಖ್ಯ.  ಆದ್ದರಿಂದ ಮಠಗಳು ಧರ್ಮ ಜಾಗೃತಿ ಕೇಂದ್ರಗಳಾಗಬೇಕೆಂದು   ಕಿಲ್ಲಾ ತೋರಗಲ್‌ನ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯರು ಹೇಳಿದರು.

ಪಟ್ಟಣದಲ್ಲಿ ಇತ್ತೀಚೆಗೆ  ಪತ್ರಿವನಮಠದ ಲಿಂ. ಶಿವಯ್ಯ ಅಜ್ಜನವರ ಹಾಗೂ ಲಿಂ. ಶಂಭುಲಿಂಗ ಸ್ವಾಮಿಗಳ ಪುಣ್ಯಾರಾಧನೆ ಅಂಗವಾಗಿ ನಡೆದ ತ್ರಿನೇತ್ರ ಕಲ್ಯಾಣ ಮಂಟಪ ಹಾಗೂ ಶ್ರೀ ಗುರುಭವನ  ಶಿಲಾನ್ಯಾಸ  ಕಾರ್ಯಕ್ರಮದ ಮಾತನಾಡಿದರು.  ಮಠಗಳು ಸಮಾಜದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದು ಧನಾತ್ಮಕವಾಗಿ ನಡೆಯುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣವಾಗಬೇಕಿದೆ. ಜೊತೆಗೆ ಭಕ್ತರು ಸಜ್ಜನರಾಗಿ ಧರ್ಮದಿಂದ ಬದುಕುವ ಮೂಲಕ ಸಮಾಜದಲ್ಲಿ  ತಮ್ಮದೇ ಆದ ಮಹತ್ವ ಸಾರಬೇಕೆಂದರು. 

ಕಾರ್ಯಕ್ರಮ ನೇತೃತ್ವ ವಹಿಸಿದ್ದ ಶಾಂತಲಿಂಗ ಸ್ವಾಮೀಜಿ ಮಾತನಾಡಿ,  ಉತ್ತಮ ಸಮಾಜದ ನಿರ್ಮಾಣಕ್ಕೆ ಸರ್ವರೂ ಕೈ ಜೋಡಿಸಬೇಕೆಂದರು. ಸಾನ್ನಿಧ್ಯ ವಹಿಸಿದ್ದ ಶ್ರೀಗುರು ಸಿದ್ಧವೀರ ಶಿವಾಚಾರ್ಯರು ಮಾತನಾಡಿ ಪತ್ರಿವನಮಠವು ಆಧ್ಮಾತ್ಮಿಕ ತಾಣವಾಗಿದ್ದು ಇಲ್ಲಿ ನೆಲೆಸಿದ್ದ ಲಿಂ. ಶಿವಯ್ಯ ಅಜ್ಜನವರ ಹಾಗೂ ಲಿಂ. ಶಂಭುಲಿಂಗ ಸ್ವಾಮಿಗಳ ಜೀವನ ಸರ್ವರಿಗೂ ಆದರ್ಶವಾಗಿದೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.    

ಶಿಲಾನ್ಯಾಸ ಕಾರ್ಯಕ್ರಮವನ್ನು ಬೆಳಗಾವಿ  ಕೆ.ಎಲ್.ಇ ಉಪಾಧ್ಯಕ್ಷ ಶಂಕರ ಬೆಳಗಾವಿ, ನವಲಗುಂದದ ಡಾ.ಮುನೇನಕೊಪ್ಪ ನೆರವೇರಿಸಿರು. ಸಮಾರಂಭದಲ್ಲಿ ನವಲಗುಂದ ಹಿರೇಮಠದ ಶಿದ್ದೇಶ್ವರ ಶಿವಾ ಚಾರ್ಯರು,  ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಸೊರಟೂರಿನ ಫಕಿರೇಶ್ವರ ಸ್ವಾಮೀಜಿ, ಗದಗನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ನವರು, ಬೆಳ್ಳೆರಿಯ ಸಚ್ಚಿದಾನಂದ ಸ್ವಾಮೀಜಿ,  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.