ADVERTISEMENT

ಮಹದಾಯಿ ಧರಣಿ 894ನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 8:58 IST
Last Updated 26 ಡಿಸೆಂಬರ್ 2017, 8:58 IST

ನರಗುಂದ: ‘ಮಹದಾಯಿಗೆ ಎಲ್ಲ ರೀತಿಯ ಹೋರಾಟ ಮಾಡಲಾಗಿದೆ. ಈಗ ಬೆಂಗಳೂರಿನಲ್ಲಿ ನಿರಂತರ ಪ್ರತಿಭಟನೆ ಆರಂಭವಾಗಿದೆ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಣ್ಣು ತೆರೆಯುತ್ತಿಲ್ಲ. ಆದ್ದರಿಂದ ಡಿ.27ರಂದು ನರಗುಂದ ಸಂಪೂರ್ಣ ಬಂದ್‌ ಆಚರಿಸಲಾಗುವುದು’ ಎಂದು ರೈತ ಸೇನೆ ಮುಖಂಡ ಪರಶುರಾಮ ಜಂಬಗಿ ಹೇಳಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 894ನೇ ದಿನವಾದ ಸೋಮವಾರ ಅವರು ಮಾತನಾಡಿದರು.

‘ಮಹದಾಯಿಗಾಗಿ ವಿವಿಧ ಸಂಘಟನೆಗಳು ಉತ್ತರ ಕರ್ನಾಟಕ ಬಂದ್‌ ಕರೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ನರಗುಂದ ಬಂದ್‌ ಆಚರಿಸಲಾಗುವುದು. ಎಲ್ಲ ಪಕ್ಷಗಳು ಮೊಸಳೆ ಕಣ್ಣೀರು ಸುರಿಸುತ್ತಿವೆ. ಆದರೆ, ಪರಿಹಾರ ಮಾತ್ರ ಸಿಗುತ್ತಿಲ್ಲ. ಎಲ್ಲ ನಾಯಕರು ತಂತ್ರ ಹೆಣೆದು ರೈತರನ್ನು ಸೆಳೆಯುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರುವ ಮೂಲಕ ಬಂದ್‌ ಯಶಸ್ವಿಗೊಳಿಸಬೇಕು’ ಎಂದರು.

‘ಮಹದಾಯಿ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಮಾತಾಡಬೇಕು. ಅದನ್ನು ಬಿಟ್ಟು ರೈತರನ್ನು ದಾರಿ ತಪ್ಪಿಸಲು ಮುಂದಾಗಬಾರದು. ಬದುಕಿನುದ್ದಕ್ಕೂ ಈ ಭಾಗದ ರೈತರು ಎಲ್ಲವನ್ನು ಹೋರಾಟದ ಮೂಲಕವೇ ಪಡೆದಿದ್ದಾರೆ. ಮಹದಾಯಿ ಹೋರಾಟ ಬಿಡುವ ಮಾತೇ ಇಲ್ಲ. ನಮ್ಮ ಹೋರಾಟಕ್ಕೆ ಬೆಲೆ ನೀಡಬೇಕು. ಚುನಾವಣೆ ತಂತ್ರ ಬಿಟ್ಟು, ಮಹದಾಯಿ ನೀರು ಕೊಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹೊದರರಂತೆ ಭಾವಿಸಿ ಮಹದಾಯಿ ಯೋಜನೆ ಅನುಷ್ಠಾನಗೊಳಿಸಬೇಕು. ರೈತರ ವಿಷಯದಲ್ಲಿ ಹಾವು, ಮುಂಗುಸಿ ಆಟವಾಡಬಾರದು’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ವಿ.ಕೆ.ಗುಡಿಸಗಾರ ಹೇಳಿದರು. ಧರಣಿಯಲ್ಲಿ ಯಲ್ಲಪ್ಪ ಸಾಬಳೆ, ಸಿದ್ದಪ್ಪ ಚಂದ್ರತ್ನವರ, ಬಿ.ಟಿತೆಗ್ಗಿನಮನಿ, ವೀರಬಸಪ್ಪ ಹೂಗಾರ, ಸಿ.ಎಸ್‌.ಪಾಟೀಲ, ಅಣ್ಣಪ್ಪಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.