ಸರ್ಕಾರ ಪ್ರಸ್ತಾವ ಮಾಡಿರುವ ಮಾಹಿತಿ ಹಕ್ಕು ಕಾನೂನಿನಲ್ಲಿರುವ ಕೆಲವು ಅಂಶಗಳು ‘ನ್ಯಾಯಸಮ್ಮತ’ವಾಗಿಲ್ಲದ ಕಾರಣ ಅವುಗಳನ್ನು ಕೈಬಿಡುವುದು ಸೂಕ್ತ ಎಂದು ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿ ಶಿಫಾರಸು ಮಾಡಿದೆ.
ಇನ್ನೂ ಕೆಲವು ಕಾಯಿದೆಗಳು ಮಾಹಿತಿ ಕೋರಿದವರ ಪ್ರಾಣಕ್ಕೆ ಎರವಾಗುವಂತಿದ್ದು ‘ಬ್ಲ್ಯಾಕ್ಮೇಲ್’ ಮತ್ತು ‘ಕೊಲೆ’ಗೆ ಉತ್ತೇಜಿಸುವಂತಿವೆ. ಹೀಗಾಗಿ ಅಂತಹ ಅಂಶಗಳನ್ನು ತೆಗೆದು ಹಾಕುವಂತೆ ಮಂಡಳಿ ಸಲಹೆ ಮಾಡಿದೆ.
ಒಂದು ಅರ್ಜಿಗೆ ಗರಿಷ್ಠ 250 ಪದಗಳಿಗೆ ಸೀಮಿತವಾದ ಕೇವಲ ಒಂದೇ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಾತ್ರ ಪಡೆಯಬಹುದು ಎಂದು ಸರ್ಕಾರ ಪ್ರಸ್ತಾವ ಸಲ್ಲಿಸಿದೆ. ಇದು ನ್ಯಾಯಸಮ್ಮತವಲ್ಲ ಎಂದು ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ.
ಒಂದು ವೇಳೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿ ಮೃತಪಟ್ಟರೆ ಅವನ ಅರ್ಜಿಯನ್ನು ಕೈಬಿಡಬೇಕು ಎಂಬ ಮತ್ತೊಂದು ಪ್ರಸ್ತಾವಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ಮಂಡಳಿ, ಮಾಹಿತಿ ಹಕ್ಕು ಹೋರಾಟಗಾರರು ಅಥವಾ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗಳ ಕೊಲೆಗೆ ಇದು ಉತ್ತೇಜಿಸುವಂತಿದೆ ಎಂದು ಅಭಿಪ್ರಾಯಪಟ್ಟಿದೆ.
ವಿಚಾರಣಾ ಹಂತದಲ್ಲಿ ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು ವಾಪಾಸ್ ಪಡೆಯಲು ಅವಕಾಶ ನೀಡಿರುವ ನಿರ್ಧಾರದಿಂದ ಮಾಹಿತಿ ಹಕ್ಕು ಹೋರಾಟಗಾರರ ಮೇಲಿನ ದೌರ್ಜನ್ಯ, ಹಿಂಸೆ ಮತ್ತು ಬ್ಲ್ಯಾಕ್ಮೇಲ್ಗೆ ದಾರಿ ಮಾಡಿಕೊಡುತ್ತದೆ. ಕಾನೂನಿನಲ್ಲಿ ಪದ, ಅಂಕಿ, ಸಂಖ್ಯೆಗಳನ್ನು ನಿಗದಿಗೊಳಿಸಿ ಮಿತಿ ಹೇರುವುದು ಸರಿಯಲ್ಲ. ಹೀಗಾಗಿ 250 ಪದಗಳ ನಿರ್ಬಂಧವನ್ನೂ ಸಡಿಲಿಸಬೇಕು ಎಂದು ಮಂಡಳಿ ಸಲಹೆ ಮಾಡಿದೆ.
ಸರ್ಕಾರದ ಈ ಪ್ರಸ್ತಾವನೆಗಳ ಕುರಿತಂತೆ ಸಾರ್ವಜನಿಕರಿಂದ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಿದ್ದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಮಂಡಳಿ ಈ ಶಿಫಾರಸುಗಳನ್ನು ಕಳಿಸಿದೆ. ಸುಭಾಸಚಂದ್ರ ಅಗರವಾಲ ಎಂಬುವರು ಮಂಡಳಿಯ ಶಿಫಾರಸುಗಳನ್ನು ಮಾಹಿತಿ ಹಕ್ಕು ಕಾಯಿದೆ ಅಡಿ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.