ADVERTISEMENT

ಮೆರವಣಿಗೆ; ಅಭ್ಯರ್ಥಿಗಳ ಬಲ ಪ್ರದರ್ಶನ

ಗದಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಅನಿಲ್‌ ಮೆಣಸಿನಕಾಯಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 10:32 IST
Last Updated 25 ಏಪ್ರಿಲ್ 2018, 10:32 IST

ಗದಗ: ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಸೇರಿದಂತೆ 13 ಅಭ್ಯರ್ಥಿಗಳು ಮಂಗಳವಾರ ಗದಗ ಮತಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು. ಇದರ ಭಾಗವಾಗಿ ಆಯಾ ಪಕ್ಷಗಳ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರು ನಡೆಸಿದ ಮೆರವಣಿಗೆಯು ಬಲ ಪ್ರದರ್ಶನದ ವೇದಿಕೆಯಾಯಿತು.

ಉರಿಬಿಸಿಲನ್ನೂ ಲೆಕ್ಕಿಸದೇ ಕ್ಷೇತ್ರದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿ
ದರು. ಬಿಸಿಲಿನಿಂದಾಗಿ ಮಧ್ಯಾಹ್ನದ ವೇಳೆ ಅಷ್ಟಾಗಿ ಜನದಟ್ಟಣೆ ಇಲ್ಲದೇ ಬಣಗುಡುವ ಗದಗ ನಗರವು ಮಂಗಳವಾರ ಜನರಿಂದ ತುಂಬಿ ತುಳುಕಿತು.

ಅನಿಲ್‌ ಮೆಣಸಿನಕಾಯಿ ಪರವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಪರ ಘೋಷಣೆ ಮೊಳಗಿಸಿದರು.

ADVERTISEMENT

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜಕವಿ ಗವಾಯಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಆರಂಭಗೊಂಡಿತು. ಅಲ್ಲಿಂದ ವೆಂಕಟೇಶ್ ಚಿತ್ರಮಂದಿರ ರಸ್ತೆ ಮರ್ಗವಾಗಿ, ಭೂಮರೆಡ್ಡಿ ವೃತ್ತ, ಬಸವೇಶ್ವರ ವೃತ್ತ, ಜೋಡು ಮಾರುತಿ ದೇವಸ್ಥಾನ, ಮುಳಗುಂದ ನಾಕಾ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿಗೆ ತಲುಪಿ, ಬಳಿಕ ನಾಮಪತ್ರ ಸಲ್ಲಿಸಲಾಯಿತು.

2 ಗಂಟೆಗಳ ಕಾಲ ಮೆರವಣಿಗೆ ನಡೆಯಿತು. ಬಿಸಿಲ ಝಳದಿಂದ ರಕ್ಷಿಸಿಕೊಳ್ಳಲು ಪಕ್ಷದ ಟೋಪಿಗಳು ನೆರವಾದವು. ಹಳ್ಳಿಗಳಿಂದ ಲಾರಿ, ಟಂಟಂ, ಟ್ರ್ಯಾಕ್ಟರ್‌ಗಳಲ್ಲಿ ಬಂದಿದ್ದ ಗ್ರಾಮೀಣರು ಹೆಜ್ಜೆ ಹಾಕಿದರು. `ಹರ್ ಹರ್ ಮೋದಿ, ಘರ್ ಘರ್ ಮೋದಿ' ಎಂದು ಘೋಷಣೆ ಕೂಗಿದರು. ಹೂವಿನಿಂದ ಅಲಂಕೃತವಾಗಿದ್ದ ಕ್ಯಾಂಟರ್‌ನಲ್ಲಿ ನಿಂತಿದ್ದ ಅನಿಲ್ ಮೆಣಸಿನಕಾಯಿ ಜನರಿಗೆ ಕೈಮುಗಿದು ಮತಯಾಚನೆ ಮಾಡಿದರು.

ಮೆರವಣಿಗೆಯಲ್ಲಿ ಭಾಗವಹಿಸಿದ ಬಿಗ್ ಬಾಸ್ ಖ್ಯಾತಿಯ ಭುವನ್, ಕಿರುತೆರೆ ನಟಿಯರಾದ ವಾಣಿಶ್ರೀ, ಅಮೃತಾ ಗಮನ ಸೆಳೆದರು. ಕೆಲ ಮಹಿಳೆಯರು ತಮ್ಮ ನೆಚ್ಚಿನ ನಟ-ನಟಿಯರ ಕೈಕುಲುಕಿ, ಸಂಭ್ರಮಿಸಿದರು.

ಉದ್ಯಮಿ ವಿಜಯ ಸಂಕೇಶ್ವರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಕುರಡಗಿ, ಮೋಹನ ಮಾಳಶೆಟ್ಟಿ, ಶಹರ
ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಶ್ರೀಕಾಂತಕಟವಟೆ, ನಗರಸಭೆ ಸದಸ್ಯರಾದ ನಾಗಲಿಂಗ ಐಲಿ, ರಾಘವೇಂದ್ರ ಯಳವತ್ತಿ, ಸಂತೋಷ ಮೇಲಗಿರಿ, ಮಂಜುನಾಥ ಮುಳಗುಂದ, ಪ್ರಮುಖರಾದ ಎಂ.ಎಂ.ಹಿರೇಮಠ ಇದ್ದರು.

ಎಸ್.ಎಸ್.ರಡ್ಡೇರ ನಾಮಪತ್ರ ಸಲ್ಲಿಕೆ: ಗದಗ ಮತಕ್ಷೇತ್ರದಿಂದ ಸಂಯುಕ್ತ ಜನತಾ ದಳದ ಅಭ್ಯರ್ಥಿ ಎಸ್.ಎಸ್.ರಡ್ಡೇರ ಮಂಗಳವಾರ ನಾಮಪತ್ರ ಸಲ್ಲಿಸಿದರು.ರಡ್ಡೇರ ಅವರು ಬೆಳಿಗ್ಗೆ ಪುಟ್ಟರಾಜ ಗವಾಯಿಗಳ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಭೂಮರಡ್ಡಿ ವೃತ್ತದಿಂದ ಆರಂಭವಾದ ಮೆರವಣಿಗೆಯು ಹಳೆ ಡಿ.ಸಿ. ಕಚೇರಿ, ಕಿತ್ತೂರು ಚನ್ನಮ್ಮ ವೃತ್ತದ ಮಾರ್ಗವಾಗಿ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಎಂಇಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಗದಗ ಮತಕ್ಷೇತ್ರದಿಂದ ಆಲ್ ಇಂಡಿಯಾ ಮಹಿಳಾ ಎಂಪವರಮೆಂಟ್ ಪಾರ್ಟಿ (ಎಂಇಪಿ) ಅಭ್ಯರ್ಥಿಯಾಗಿ ಶಿರಾಜ್ ಎಂ. ಬಳ್ಳಾರಿ ಮಂಗಳವಾರ ನಾಮಪತ್ರ ಸಲ್ಲಿಸಿದರು.ತೆರೆದ ವಾಹನದಲ್ಲಿ ಉಪ ವಿಭಾಗಾಧಿಕಾರಿ ಕಚೇರಿಗೆ ಬಂದ ಅವರು ಉಮೇದುವಾರಿಕೆ ಸಲ್ಲಿಸಿದರು.

ನಗರಸಭೆ ಮಾಜಿ ಸದಸ್ಯ ಕಾಶೀಂಸಾಬ್ ಉಮ್ನಾಬಾದಿ, ಮೊಹ್ಮದಗೌಸ್ ಬಳ್ಳಾರಿ, ಸಿದ್ದಲಿಂಗಪ್ಪ ಕುರಗೋಡ, ಶಮಶುದ್ದೀನ್ ಗಡಾದ, ಚಂದ್ರು ಪಾಟೀಲ, ಸಲೀಂಸಾಬ್ ಬಬರ್ಚಿ, ಅನ್ವರಸಾಬ್ ಬಳ್ಳಾರಿ, ಹುಸೇನಸಾಬ್ ಜೈನಾಪುರ, ಬಾಬುಸಾಬ್ ಗಬ್ಬೂರ, ಬಸವರಾಜ ಕುರಗೋಡ, ರತ್ನಾ ಕುರಗೋಡ, ಜಾಫರಸಾಬ್ ಢಾಲಾಯತ, ಇರ್ಫಾನ್ ಡಂಬಳ, ರಫೀಕ್ ನಾಯ್ಕರ, ಸಲೀಂ ನರಗುಂದ, ದಾದಾಪೀರ್ ನಾಯ್ಕರ, ಇಸಾಕ್ ಇರಕಲ್ ಇದ್ದರು.

**
ಅಮಿತ್ ಶಾ ಭೇಟಿ ಹಾಗೂ ಶ್ರೀರಾಮುಲು ಅವರ ರೋಡ್ ಶೋ ನಂತರ ಕಾರ್ಯಕರ್ತರಲ್ಲಿ ಹುರುಪು ಹೆಚ್ಚಿಸಿದೆ. ಬಿಜೆಪಿ ಗೆಲುವಿನ ವಾತಾವರಣ ಕಾಣಿಸುತ್ತಿದೆ
– ಅನಿಲ್ ಮೆಣಸಿನಕಾಯಿ, ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.