ADVERTISEMENT

ಯೋಧನ ಶವದ ಮೆರವಣಿಗೆ

ಸಹಸ್ರಾರು ಜನರ ಭಾವಪೂರ್ಣ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 6:37 IST
Last Updated 4 ಜುಲೈ 2013, 6:37 IST

ನರಗುಂದ: ಉತ್ತರಾಖಂಡ ಪ್ರವಾಹದ ಸಂತ್ರಸ್ತರ ರಕ್ಷಣೆಗೆ ತೆರಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ  ನರಗುಂದ ತಾಲ್ಲೂಕಿನ ಜಗಾಪುರದ ಯೋಧ ಬಸವರಾಜನ ಶವದ ಮೆರವಣಿಗೆ ನರಗುಂದ ಪಟ್ಟಣದಲ್ಲಿ ಬೃಹತ್ ಜನಸಾಗರದ  ಮಧ್ಯೆ ಬುಧವಾರ  ಸಕಲ ಸರ್ಕಾರಿ  ಗೌರವಗಳೊಂದಿಗೆ ನಡೆಯಿತು. ಒಂದು ವಾರದಿಂದ ಕಾಯುತ್ತಿದ್ದ ತಾಲ್ಲೂಕಿನ ಜನರು ಶವ ಬಂದಾಕ್ಷಣ ದು:ಖತಪ್ತರಾಗಿದ್ದು ಕಂಡು ಬಂತು.

ಸರಿಯಾಗಿ ಮಧ್ಯಾಹ್ನ 3.45ರ ಸುಮಾರಿಗೆ ಹುಬ್ಬಳ್ಳಿಯಿಂದ ಪೊಲೀಸ್  ಆಂಬ್ಯುಲನ್ಸ್ ಮೂಲಕ ಆಗಮಿಸಿದ ಶವದ ಪೆಟ್ಟಿಗೆಯನ್ನು  ಶಾಸಕ ಬಿ.ಆರ್.ಯಾವಗಲ್, ಜಿಪಂ ಅಧ್ಯಕ್ಷ ಎಂ.ಎಸ್.ಪಾಟೀಲ,  ಜಿಲ್ಲಾಧಿಕಾರಿ ಎಸ್.ಟಿ.ಆಂಜನಕುಮಾರ, ಎಸ್.ಪಿ. ಡಾ.ಶರಣಪ್ಪ, ಮಠಾಧೀಶರಾದ ಶಾಂತಲಿಂಗ ಸ್ವಾಮೀಜಿ, ಸಿದ್ದವೀರ ಶಿವಯೋಗಿ ಶಿವಾಚಾರ್ಯರು ಸೇರಿದಂತೆ ಮೊದಲಾದವರು ಸ್ವಾಗತಿಸಿ ಪುಷ್ಪಗುಚ್ಛ  ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.

ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿದ ಬೃಹತ್ ಮೆರವಣಿಗೆಗೆ ನೋಡಲು ಇಡಿ ರಸ್ತೆಯುದ್ದಕ್ಕೂ, ಎಲ್ಲ ಮನೆಗಳ ಎದುರು  ಸಾಲುಗಟ್ಟಿದ ನಿಂತಿದ್ದು ಕಂಡು ಬಂತು. ಜಿಲ್ಲಾಡಳಿತ ಹಾಗೂ ತಾಲ್ಲೂಕಾಡಳಿತ ಸಂಪೂರ್ಣ ಮೆರವಣಗೆಯುದ್ದಕ್ಕೂ ಕಂಡು ಬಂದು ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಯೋಧ ಬಸವರಾಜ ಅವರ ಶವದ ಮೆರವಣಿಗೆ ನಡೆಯಿತು.

ಮೊಟಕುಗೊಂಡ ಶಾಲೆಗಳು: ಯೋಧ  ಬಸವರಾಜನಗೆ ಅಂತಿಮ ನಮನ ಸಲ್ಲಿಸುವ ಸಲುವಾಗಿ  ತಾಲ್ಲೂಕಿನ ಎಲ್ಲ ಶಾಲೆಗಳು  ಅರ್ಧಕ್ಕೆ ಮೊಟಕುಗೊಳಿಸಿ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲಗೊಂಡಿದ್ದು ಕಂಡು ಬಂತು. 

ಮೆರವಣಗೆಯುದ್ದಕ್ಕೂ ದೇಶ  ಭಕ್ತಿಗೀತೆಗಳು, ಬ್ಯಾಂಡ್‌ಸೆಟ್, ಜಾಂಜ್‌ಮೇಳ ವಾದ್ಯ ಮೊಳಗಿದ್ದು ಕಂಡು ಬಂತು. ನಂತರ ಯೋಧ  ಬಸವರಾಜನ ಸ್ವಗ್ರಾಮವಾದ ಜಗಾಪುರಕ್ಕೆ ಶವವನ್ನು  ಎಲ್ಲ ಸರಕಾರಿ ಗೌರವಗಳೊಂದಿಗೆ ತೆಗೆದುಕೊಂಡು ಹೋಗಲಾಯಿತು.  ಸಂಗಗೌಡ ಪಾಟೀಲ, ಸಿದ್ನಾಳ, ಅನೀ ಧರಿಯನ್ನವರ, ಚಂದ್ರು ದಂಡಿನ, ಎಸ್.ಡಿ.ಕೊಳ್ಳಿಯವರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.