ನರಗುಂದ: ‘ಮಹದಾಯಿ ಹೋರಾಟ ನಿರಂತರ. ನೀರು ಹರಿಯುವ ತನಕ ನಿಲ್ಲಿಸಬಾರದು ಎಂದು ಸಂಕಲ್ಪ ಇಟ್ಟುಕೊಂಡು ಹೋರಾಟ ನಡೆದಿದೆ. ರೈತರು ಒಗ್ಗಟ್ಟಾಗಬೇಕು.ರಾಜಕೀಯ ಬಿಟ್ಟು ಹೊರಬರಬೇಕು’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯೆ ಶಾಂತವ್ವ ಚಲುವಣ್ಣವರ ಹೇಳಿದರು.ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 993ನೇ ದಿನ ಮಂಗಳವಾರ ಅವರು ಮಾತನಾಡಿ, ‘ಪಕ್ಷಾತೀತವಾಗಿ ಮಹದಾಯಿ ಹೋರಾಟ ಮಾಡಬೇಕು. ಇದರಲ್ಲಿ ಯಾವುದೇ ರಾಜಕೀಯ ವಾಸನೆ ಸುಳಿಯಬಾರದು’ ಎಂದರು.
‘ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ನಾವು ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಬಾಗಿಲು ತಟ್ಟಿದ್ದೇವೆ. ಎಲ್ಲರೂ ನಮ್ಮ ಹೋರಾಟ ನಿರ್ಲಕ್ಷ್ಯ ಮಾಡಿದ್ದಾರೆ. ಕೆಲ ರೈತರೂ ಸಹ ರಾಜಕೀಯ ಪಕ್ಷಗಳಿಗೆ ಅಂಟಿಕೊಂಡಿದ್ದಾರೆ. ಇದನ್ನು ತೊರೆದು ಅವರು ಹೋರಾಟದಲ್ಲಿ ಭಾಗವಹಿಸಬೇಕು. ಆಗ ಮಾತ್ರ ರಾಜಕೀಯ ಹುನ್ನಾರ ತಡೆಯಲು ಸಾಧ್ಯವಾಗುತ್ತದೆ. ಆಗ ಹೋರಾಟ ಯಶಸ್ವಿಯಾಗುತ್ತದೆ’ ಎಂದರು.
ಎಸ್.ಬಿ.ಜೋಗಣ್ಣವರ ಮಾತನಾಡಿ ‘ಏಪ್ರಿಲ್ 10ರಂದು ಮಹದಾಯಿ ಹೋರಾಟ 1 ಸಾವಿರ ದಿನ ಪೂರೈಸಲಿವೆ. ಆ ದಿನದ ಹೋರಾಟದ ಕುರಿತು ಚರ್ಚಿಸಲು ಏ. 5ರಂದು ಸಮನ್ವಯ ಸಮಿತಿ ಸಭೆ ನಡೆಯಲಿದೆ. ನಂತರ ಹೊಸ ನಿರ್ಧಾರ ಪ್ರಕಟಿಸಲಾಗುವುದು’ ಎಂದರು.ಧರಣಿಯಲ್ಲಿ ಶ್ರೀಶೈಲ ಮೆಟಿ, ವೀರಬಸಪ್ಪ ಹೂಗಾರ, ವೆಂಕಪ್ಪ ಹುಜರತ್ತಿ, ಹನಮಂತ ಪಡೆಸೂರ, ಅರ್ಜುನ ಮಾನೆ, ಚನ್ನಪ್ಪಗೌಡ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.