ADVERTISEMENT

ಲಕ್ಷಾಂತರದ ಮೌಲ್ಯದ ಅಕ್ರಮ ಮರಳು ಸಾಗಾಟ:ಜಿಲ್ಲಾಡಳಿತಕ್ಕೆ ಕ್ರಮ ಕೈಗೊಳ್ಳಲು ಗಡಿ ಸಮಸ್ಯೆ!

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 6:00 IST
Last Updated 19 ಅಕ್ಟೋಬರ್ 2012, 6:00 IST

ಹರಿಹರ: ನಗರದ ತುಂಗಭದ್ರಾ ಸೇತುವೆ ಆಚೆ ಬದಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಎದುರು ಗುರುವಾರ ನೂತನ ಸೇತುವೆ ಕಾಮಗಾರಿಗಾಗಿ ಗುಂಡಿಗಳನ್ನು ತೆಗೆಯುತ್ತಿದ್ದ ಗುತ್ತಿಗೆದಾರರು ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮರಳನ್ನು ಖಾಸಗಿ ವ್ಯಕ್ತಿಗಳ ಟ್ರ್ಯಾಕ್ಟರ್‌ಗಳಿಗೆ ತುಂಬಿ ಸಾಗಿಸುವ ಮೂಲಕ ಸರ್ಕಾರಿ ಖಜಾನೆಗೆ ಕನ್ನ ಹಾಕಿದ್ದಾರೆ.

ಸೇತುವೆ ಗುತ್ತಿಗೆದಾರರು ತುಂಗ ಭದ್ರಾ ನದಿ ದಡದಲ್ಲಿ ಮರಳನ್ನು ಖಾಸಗಿಯರಿಗೆ ಕೊಡುತ್ತಿದ್ದಾರೆ ಎಂಬ ಸುದ್ದಿ ತಾಲ್ಲೂಕಿನಲ್ಲಿ ಮಿಂಚಿನಂತೆ ಹಬ್ಬಿತ್ತು. ಮಧ್ಯಾಹ್ನ 12ರಿಂದಲೇ ಜೆಸಿಬಿ ಯಂತ್ರದ ಮೂಲಕ ಸೇತುವೆ ಕಾಮಗಾರಿಗೆ ಅವಶ್ಯಕವಾದ ಗುಂಡಿ ತೆಗೆದು ಅದರಲ್ಲಿದ್ದ ಮರಳನ್ನು ಖಾಸಗಿ ಯವರಿಗೆ ನೀಡುವ ಕೆಲಸ ಪ್ರಾರಂಭಿಸ ಲಾಗಿತ್ತು ಎಂದು ಅಲ್ಲಿದ್ದ ಸ್ಥಳೀಯರು ಮಾಧ್ಯಮದವರಿಗೆ ತಿಳಿಸಿದರು.

ಈ ದೃಶ್ಯವನ್ನು ನೋಡಲು ನೂರಾರು ಜನ ಸೇತುವೆ ಮೇಲೆ ಸೇರಿದ್ದರು. ಈ  ಕುರಿತು ತಾಲ್ಲೂಕು ಇಒ ಡಾ.ರಂಗಸ್ವಾಮಿ ಅವರನ್ನು ಮೊಬೈಲ್ ಸಂಪರ್ಕಿಸಿದಾಗ ಅವರು ದಾವಣಗೆರೆ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಇದ್ದರು. ಮರಳು ತೆಗೆದು ಸಾಗಿಸುತ್ತಿರುವ ವಿಚಾರ ತಮಗೆ ತಿಳಿದಿಲ್ಲ. ನದಿ ಆಚೆ ಬದಿಯಲ್ಲಿ ಮರಳುಗಾರಿಕೆ ನಡೆಯು ತ್ತಿದ್ದರೆ ಅದು ನಮ್ಮ ವ್ಯಾಪ್ತಿಗೆ ಬರುವು ದಿಲ್ಲ. ಅದಕ್ಕಾಗಿ ರಾಣೇಬೆನ್ನೂರಿನ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ಈ ಕುರಿತು ಸಿಪಿಐ ಯು.ಎಚ್. ಸಾತೇನಹಳ್ಳಿ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ, ಮರಳುಗಾ ರಿಕೆ ಕುಮಾರಪಟ್ಟಣ ವ್ಯಾಪ್ತಿಯಲ್ಲಿ ನಡೆ ಯುತ್ತಿರುವುದರಿಂದ ನಾವು ಅವರನ್ನು ವಿಚಾರಿಸಲು ಗಡಿ ಸಮಸ್ಯೆಯಾಗುತ್ತದೆ.

ನಮ್ಮ ಕಣ್ಣೆದುರಿಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರೂ ನಾವೇನು ಮಾಡಲು ಅಸಹಾಯಕರಾಗಿದ್ದೇವೆ. ಕಾನೂನನ್ನು ಮೀರಿ ಕಾರ್ಯ ನಿರ್ವಹಿ ಸಲು ಸಾಧ್ಯವಿಲ್ಲ. ಸಾಧ್ಯವಾದರೆ, ಕುಮಾರಪಟ್ಟಣ ಗ್ರಾಮಾಂತರ ಪಿಎಸ್‌ಐ ಭೀಮಣ್ಣ ಚೂರಿ ಅವರನ್ನು ಸಂಪರ್ಕಿಸಿ ಎಂದು ಮೊಬೈಲ್ ನಂಬರ್ ನೀಡಿದರು.

ಅಷ್ಟೊತ್ತಿಗಾಗಲೇ ಗಜಗಾತ್ರದ ಜೆಸಿಬಿ ಯಂತ್ರ ನೂರಾರು ಟ್ರ್ಯಾಕ್ಟರ್‌ನಷ್ಟು ಮರಳನ್ನು ಸಾಗಿಸಿದ್ದವು. ಮರ ಳನ್ನು ತುಂಬಿಕೊಳ್ಳಲು ಸರತಿಯಲ್ಲಿ 75ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ನಿಂತಿದ್ದವು. ಪಿಎಸ್‌ಐ ಭೀಮಣ್ಣ ಚೂರಿ ಅವರನ್ನು ಸಂಪರ್ಕಿಸಿದಾಗ, ಘಟನೆ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದ್ದೇನೆ. ರಾಣೇಬೆನ್ನೂರಿನ ತಹಶೀಲ್ದಾರ್ ಅವ ರಿಂದ ಮರಳು ಸಾಗಿಸಲು ಪರವಾನಗಿ ತೆಗೆದುಕೊಂಡು ಬಂದು ನಂತರ ಗುಂಡಿ ತೆಗೆಯಬೇಕು ಎಂದು ತಾಕೀತು ಮಾಡಿ, ಮರಳು ಸಾಗಿಸುವುದನ್ನು ಬಂದ್ ಮಾಡಿಸಿದ್ದೇವೆ ತಿಳಿಸಿದ್ದಾರೆ.

ಲಕ್ಷಾಂತರ ಮೌಲ್ಯದ ಮರಳು ಅಕ್ರಮವಾಗಿ ಸಾಗಿ ಸರ್ಕಾರದ ಖಜಾ ನೆಗೆ ಅನ್ಯಾಯವಾಗಿದೆ. ಹರಿಹರ ತಾಲ್ಲೂಕಿನ ಪೊಲೀಸರಿಗೆ ಕುಮಾರ ಪಟ್ಟಣ ಭಾಗದಲ್ಲಿ ನಡೆಯುವ ಅಕ್ರಮ ಮರಳುಗಾರಿಕೆ ತಡೆಯಲು ಅಥವಾ ಬಂಧಿಸಲು ಕಾನೂನು ಪರಿಮಿತಿ ಅಡ್ಡ ಬರುತ್ತದೆ. ರಾಣೇಬೆನ್ನೂರು ತಾಲ್ಲೂ ಕಿನ ಕಟ್ಟಕಡೆಯ ಗ್ರಾಮದ ಕುಮಾರ ಪಟ್ಟಣದಲ್ಲಿ ಏನು ನಡೆಯುತ್ತಿದೆ ಎಂದು ತಾಲ್ಲೂಕು ಆಡಳಿತಕ್ಕೆ ಗೊತ್ತಾಗುವುದೇ ಇಲ್ಲ. ಈ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಹೊಸ ನೀತಿಗಳ ತುರ್ತು ಇದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.