ಲಕ್ಷ್ಮೇಶ್ವರ: ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಹೋರಾಟ ಸಮಿತಿ ಸದಸ್ಯರು ಮಾಜಿ ಶಾಸಕರಾದ ಎಸ್.ಎನ್. ಪಾಟೀಲ, ಗಂಗಣ್ಣ ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ ಅವರ ನೇತೃತ್ವದಲ್ಲಿ ಈಚೆಗೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಕೇಂದ್ರವಾಗಲು ಲಕ್ಷ್ಮೇಶ್ವರ ಎಲ್ಲ ಅರ್ಹತೆ ಹೊಂದಿದೆ. ತಾಲ್ಲೂಕು ರಚನೆಗಾಗಿ ನೇಮಿಸಲ್ಪಟ್ಟ ಎಂ.ವಾಸುದೇವರಾವ್, ಪಿ.ಸ. ಗದ್ದಿಗೌಡರ್ ಹಾಗೂ ಟಿ.ಎಂ. ಹುಂಡೇಕಾರ ಸಮಿತಿಗಳು ಲಕ್ಷ್ಮೇಶ್ವರ ತಾಲ್ಲೂಕು ಕೇಂದ್ರ ಆಗಲು ಎಲ್ಲ ಅರ್ಹತೆ ಹೊಂದಿದೆ ಎಂದು ಶಿಫಾರಸ್ಸು ಮಾಡಿದ್ದು ಈ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಕೊಡಲಾಗಿದೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.
ಭರವಸೆ: ಹೊಸ ತಾಲ್ಲೂಕು ಘೋಷಣೆ ಸಂದರ್ಭದಲ್ಲಿ ಮೊದಲಿಗೆ ಲಕ್ಷ್ಮೇಶ್ವರ ಹಾಗೂ ಗಜೇಂದ್ರಗಡ ಪಟ್ಟಣಗಳನ್ನು ತಾಲ್ಲೂಕು ಕೇಂದ್ರ ಎಂದು ಘೋಷಣೆ ಮಾಡುತ್ತೇವೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ ಸಮಿತಿಗೆ ತಿಳಿಸಿದ್ದಾರೆ ಎಂದು ಹೋರಾಟ ಸಮಿತಿ ಕಾರ್ಯದರ್ಶಿ ಎನ್.ಜಿ. ಹೊಂಬಳ ತಿಳಿಸಿದರು. ಎಸ್.ಪಿ. ಪಾಟೀಲ, ಟಿ.ಎನ್. ಸಂಶಿ, ಟಿ.ಈಶ್ವರ ಮತ್ತಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.