ADVERTISEMENT

ವೃತ್ತಿ ಧರ್ಮ ಕಾಪಾಡಿ: ಪತ್ರಕರ್ತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 6:14 IST
Last Updated 2 ಜುಲೈ 2013, 6:14 IST

ಗದಗ: ವೈಯಕ್ತಿಕ ನೋವು-ನಲಿವು ಮರೆತು ಜನರ ಸಮಸ್ಯೆಗಳನ್ನು ಬರಹದ ಮೂಲಕ ಸರ್ಕಾರದ ಗಮನ ಸೆಳೆಯುತ್ತಿರುವ ಪತ್ರಕರ್ತರು ಸಮಾಜ ಪರಿವರ್ತನೆಯ ಹರಿಕಾರರು ಎಂದು ಜಿಲ್ಲಾಧಿಕಾರಿ ಎಸ್.ಟಿ.ಅಂಜನಕುಮಾರ ಹೇಳಿದರು.

ನಗರದ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು. ಸಮಾಜದ ಅಂಕು, ಡೊಂಕು ತಿದ್ದುವ, ಸರ್ಕಾರವನ್ನು ಎಚ್ಚರಿಸುವ ಮಹತ್ವದ ಕಾರ್ಯದಲ್ಲಿ ತೊಡಗಿರುವ ಪತ್ರಕರ್ತರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ. ಪತ್ರಕರ್ತರು ಜವಾಬ್ದಾರಿಯಿಂದ ತಮ್ಮ ವೃತ್ತಿಧರ್ಮ ಕಾಪಾಡಿಕೊಂಡು ಕಾರ್ಯನಿರ್ವಹಿಸಿದಲ್ಲಿ ಮಾಧ್ಯಮ ಕ್ಷೇತ್ರ ಮತ್ತಷ್ಟು ಗಟ್ಟಿಗೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಡಾ.ಎಸ್.ಡಿ.ಶರಣಪ್ಪ ಮಾತನಾಡಿ, ಪತ್ರಕರ್ತರಿಗೆ ಭದ್ರತೆ ಕಲ್ಪಿಸುವುದು ಹಾಗೂ ಸಂಘದ ಬೇಡಿಕೆಗೆ ಪೂರಕವಾಗಿ ಪೊಲೀಸ್ ಇಲಾಖೆ ಸ್ಪಂದಿಸುತ್ತದೆ. ಪತ್ರಕರ್ತರಲ್ಲದವರು ತಮ್ಮ ವಾಹನದ ಮೇಲೆ ಪ್ರೆಸ್ ಸ್ಟಿಕರ್ ಹಾಕಿರುವುದನ್ನು ತೆಗೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಧಿಕಾರಿ ವೀರಣ್ಣ ತುರಮರಿ ಮಾತನಾಡಿ, ಗ್ರಾಮೀಣ ಪತ್ರಕರ್ತರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.

ಪತ್ರಕರ್ತ ಡಾ.ಅನಂತ ಕಾರ್ಕಳ ಮಾತನಾಡಿ, ಪತ್ರಿಕಾ ಭವನಕ್ಕೆ ಅಗತ್ಯ ಸೌಲಭ್ಯ, ಪತ್ರಕರ್ತರಿಗೆ ಬಸ್‌ಪಾಸ್, ಆರೋಗ್ಯ ಯೋಜನೆಯ ಯಶಸ್ವಿನಿ, ವಾಜಪೇಯಿ ಆರೋಗ್ಯ ಕಾರ್ಡ್ ಹಾಗೂ ಇತರೆ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಕುಲಕರ್ಣಿ ಮಾತನಾಡಿದರು.

ಕಿತ್ತೂರು ಕರ್ನಾಟಕ ಸಂಪಾದಕ ಮಂಜುನಾಥ ಅಬ್ಬಿಗೇರಿ, ನಾಗರಿಕ ಪತ್ರಿಕೆ ಸಂಪಾದಕ ಅಜಿತ್ ಹೊಂಬಾಳಿ, ಡಿಎಚ್‌ಒ ಡಿ.ಬಿ.ಚನ್ನಶೆಟ್ಟಿ, ಪತ್ರಿಕೆ ವಿತರಕರ ಸಂಘದ ಅಧ್ಯಕ್ಷ ಶಿವಯ್ಯ ಕುಮಾರಸ್ವಾಮಿಮಠ ಹಾಜರಿದ್ದರು. ಮಂಜುಳಾ ಮಾಂಡ್ರೆ ಪ್ರಾರ್ಥಿಸಿದರು. ಟಿ.ಎನ್.ಭಾಂಡಗೆ ಸ್ವಾಗತಿಸಿದರು. ಅಂದಾನಪ್ಪ ವಿಭೂತಿ ನಿರೂಪಿಸಿದರು. ಪತ್ರಕರ್ತ ಮೌನೇಶ ಬಡಿಗೇರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.