ADVERTISEMENT

ಶವ ಸಂಸ್ಕಾರ ಮಾಡುವುದೆಲ್ಲಿ?

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 8:20 IST
Last Updated 4 ಆಗಸ್ಟ್ 2013, 8:20 IST

ರೋಣ: ತಾಲ್ಲೂಕಿನ ಗ್ರಾಮಗಳಲ್ಲಿ ಯಾರಾದರೂ ಸತ್ತರೆ ಶವವನ್ನು ಎಲ್ಲಿ ಮಣ್ಣು ಮಾಡಬೇಕು ಸುಡಬೇಕೋ? ಅಥವಾ ಹದ್ದು, ನಾಯಿ, ನರಿಗಳ ಪಾಲಾಗುವಂತೆ ಎಲ್ಲಾದರೂ ಬಿಸಾಡಬೇಕೋ? ಎಂಬ ದಟ್ಟವಾದ ಸಮಸ್ಯೆ  ಎಲ್ಲರನ್ನು ಕಾಡುತ್ತದೆ.

ಇದು ಆಶ್ಚರ್ಯವೆನಿಸಿದರೂ ಸತ್ಯ. ಈ ಕುರಿತು ವ್ಯವಸ್ಥಿತ ರುದ್ರಭೂಮಿ ಕಲ್ಪಿಸುವಲ್ಲಿ ಗಮನ ಹರಿಸಬೇಕಾದ ತಾಲ್ಲೂಕು ಆಡಳಿತ ಮೌನಕ್ಕೆ ಜಾರಿದೆ!

ರೋಣ ತಾಲ್ಲೂಕಿನಲ್ಲಿ ಇರುವ 97 ಹಳ್ಳಿಗಳ ಪೈಕಿ 48 ಹಳ್ಳಿಗಳಲ್ಲಿ ಶವ ಸಂಸ್ಕಾರ ಮಾಡಲು ರುದ್ರಭೂಮಿಗಳಿಲ್ಲ. ಕೆಲವೆಡೆ ರುದ್ರಭೂಮಿಗೆ ಜಾಗೆಯನ್ನು ಮೀಸಲಿರಿಸಿದ್ದರೂ ಅದು ಉಪಯೋಗಕ್ಕೆ ಬಾರದಾಗಿದೆ.

ಗ್ರಾಮದ ಜನತೆಗೆ ಶವಗಳನ್ನು ಎಲ್ಲಿ ಸಂಸ್ಕಾರ ಮಾಡುವುದು ಎಂಬ ಚಿಂತೆ ಕಾಡಲಾರಂಭಿಸಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ತಾಲ್ಲೂಕು ಆಡಳಿತ ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಲಿಂಗಮುದ್ರೆ ಕಲ್ಲು: ಆಯಾ ಗ್ರಾಮಕ್ಕೆ ಸಂಬಂಧಿಸಿದ ಸ್ಮಶಾನ ಜಾಗವನ್ನು ಗುರುತಿಸಲು ಲಿಂಗ ಮುದ್ರೆ ಕಲ್ಲುಗಳನ್ನು ನೆಟ್ಟಿರುತ್ತಾರೆ.  ಈ ಲಿಂಗಮುದ್ರೆ ಕಲ್ಲಿನಲ್ಲಿ ಸೂರ್ಯ, ಚಂದ್ರ, ಈಶ್ವರ ಮೂರ್ತಿ ಚಿತ್ರಗಳಿರುತ್ತವೆ. ಇದನ್ನು ಸ್ಥಾಪಿಸುವುದರಿಂದ ಸ್ಮಶಾನ ಜಾಗಕ್ಕೂ ಮತ್ತು ನಿಧನ ಹೊಂದಿದವರಿಗೂ ಮೋಕ್ಷ ಸಿಕ್ಕುತ್ತದೆ ಎಂಬ ಪ್ರತೀತಿಯಿದೆ.

ರುದ್ರಭೂಮಿ ಇಲ್ಲದ ಗ್ರಾಮಗಳು:
ತಾಲ್ಲೂಕಿನ ಚಿಕ್ಕಮಣ್ಣೂರ, ಅರಹುಣಸಿ, ಬಾಸಲಾಪೂರ, ಹಿರೇಮಣ್ಣೂರ, ಮುದೇನಗುಡಿ, ಕೊತಬಾಳ, ನೈನಾಪುರ, ಬಸರಕೋಡ, ಮುಗಳಿ, ತಳ್ಳಿಹಾಳ, ಶಾಂತಗೇರಿ, ಬೊಮ್ಮಸಾಗರ, ಸರ್ಜಾಪೂರ, ಚಿಕ್ಕಅಳಗುಂಡಿ, ಗುಳಗುಳಿ, ಹೊನ್ನಿಗನೂರ, ಯರೇಕುರಬನಾಳ, ಗಾಡಗೋಳಿ, ಮೆಣಸಗಿ, ಮೇಲ್ಮಠ, ಹುಲ್ಲೂರ, ಹುನಗುಂಡಿ, ಅಮರಗೋಳ, ಬಿ.ಎಸ್.ಬೇಲೇರಿ, ಸಂದಿಗವಾಡ, ಬೆಳವಣಿಕಿ, ಬೂದಿಹಾಳ, ಯರೇಬೆಲೇರಿ, ಕುರಡಗಿ, ನಾಗರಾಳ,  ವೀರಾಪುರ, ಕೊಡಗಾನೂರ, ಉಣಚಗೇರಿ, ನೆಲ್ಲೂರ, ರಾಂಪೂರ, ಹಿರೇಕೊಪ್ಪ, ರಾಜೂರ, ಬೈರಾಪೂರ, ಅಮರಗಟ್ಟಿ, ನಾಗೇಂದ್ರಗಡ, ನಾಗರಶಿಕೊಪ್ಪ, ಮ್ಯೋಕಲಝರಿ, ಜಿಗೇರಿ ಮೊದಲಾದ ಗ್ರಾಮಗಳಲ್ಲಿ ವ್ಯವಸ್ಥಿತ ರುದ್ರಭೂಮಿ ಇಲ್ಲದ್ದರಿಂದ ಶವವನ್ನು ಖಾಸಗಿ ಜಮೀನಿನಲ್ಲಿ ಹಾಗೂ ಹಳ್ಳದಲ್ಲಿ ಸಂಸ್ಕಾರ ಮಾಡುತ್ತಿದ್ದಾರೆ.
ಬಸವರಾಜ ಪಟ್ಟಣಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.