ಶಿರಹಟ್ಟಿ: ಸಮಾಜದಲ್ಲಿ ಎಲ್ಲ ವರ್ಗದವರು ಸರಿಸಮಾನರು. ಮೇಲು ಕೀಳೆಂಬ ಭೇದ ತೊರೆದು ಶರಣರ ತತ್ವದಂತೆ ಸನ್ಮಾರ್ಗದಲ್ಲಿ ನಡೆಯಬೇಕಾದುದು ಅತ್ಯಗತ್ಯ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಬುಧವಾರ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿ ಜರುಗಿದ ನಮ್ಮ ನಡೆ ಅಸ್ಪೃಶ್ಯತಾ ನಿರ್ಮೂಲನಾ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಸವಾದಿ ಶರಣರು ಮಾನವ ಜನಾಂದ ಅಭಿವೃದ್ಧಿ ಶ್ರಮಿಸಿದ್ದಾರೆ. ಮನುಷ್ಯನಲ್ಲಿ ಪಂಕ್ತಿಭೇದ ಖಂಡಿತ ಸಲ್ಲದು. ಸಮಾಜದಲ್ಲಿ ಜಾತಿ ರಹಿತ ವರ್ಗ ಕಟ್ಟಬೇಕು. ಇದಕ್ಕೆ ಭಾವನಾತ್ಮ ಸಂಬಂಧ ಅಗತ್ಯ ಎಂದು ಹೇಳಿದರು.
ಡಾ. ಅಂಬೇಡ್ಕರ ಪ್ರಶಸ್ತಿ ಪುರಸ್ಕೃ ಎಂ.ಎಸ್. ಮುತ್ತುರಾಜ ಮಾತನಾಡಿ, ಇಂತಹ ಆಧುನಿಕ ಯುಗದಲ್ಲೂ ಇನ್ನು ಕೆಲ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಮುಂದುವರಿದು ದಲಿತರ ಕ್ಷೌರ ನಿರಾಕರಣೆ ಪ್ರಕರಣ ನಡೆಯುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅದರಲ್ಲಿ ನಮ್ಮ ನಡೆ ಅಸ್ಪೃಶ್ಯತಾ ನಿರ್ಮೂಲನಾ ಕಡೆಗೆ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿದೆ ಎಂದರು.
ಅಸ್ಪೃಶ್ಯತೆ ಆಚರಣೆ ಕಾನೂನಿನ ಅನ್ವಯ ಅಪರಾಧ. ಜಾತಿ ಪದ್ದತಿಯನ್ನು ಸಮಾಜದಿಂದ ಸಂಪೂರ್ಣ ತೊಲಗಿಸಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೀಸಿ, ರಾಮಚಂದ್ರ ಗಡಾದ, ನಾಗರಾಜ ಪೋತರಾಜ, ವೀರನಗೌಡ ಪಾಟೀಲ, ಹಿರೇಮಠ, ಎಸ್.ಬಿ. ಹರ್ತಿ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.