ADVERTISEMENT

ಸರಿಯಾಗಿ ಹಂಚಿಕೆ ಆಗದ ಪಡಿತರ ಸಾಮಗ್ರಿ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 10:53 IST
Last Updated 24 ಮಾರ್ಚ್ 2018, 10:53 IST

ರೋಣ: ‘ತಾಲ್ಲೂಕಿನ ಕುರಹಟ್ಟಿ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರಾದ ಹಿರೇಮಠ ಅವರು ಸರಿಯಾಗಿ ಪಡಿತರ ವಿತರಿಸುತ್ತಿಲ್ಲ. ಇದನ್ನು ಪ್ರಶ್ನಿಸಿದರೆ, ನಮ್ಮ ವಿರುದ್ಧವೇ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಾರೆ. ದಲಿತರ ಮೇಲೆ ಅವರು ಎಸಗುತ್ತಿರುವ ದೌರ್ಜನ್ಯ ಮಿತಿ ಮೀರಿದೆ. ಇದನ್ನು ನಿಯಂತ್ರಣ ಮಾಡುವವರು ಯಾರೂ ಇಲ್ಲದಂತಾಗಿದೆ’ ಎಂದು ಕುರಹಟ್ಟಿ ಗ್ರಾಮದ ದಲಿತ ಮುಖಂಡ ಮಜೂರಪ್ಪ ಮಾದರ ಆರೋಪಿಸಿದರು.

ರೋಣ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ತಡೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ತಾಲ್ಲೂಕಿನಾದ್ಯಂತ ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮ ಅವ್ಯಾಹತವಾಗಿ ನಡೆದಿದೆ. ತಹಶೀಲ್ದಾರರು ಕೂಡಲೇ ಇಂಥ ನ್ಯಾಯ ಬೆಲೆ ಅಂಗಡಿಯವರ ಪರವಾನಗಿ ರದ್ದು ಮಾಡಬೇಕು’ ಎಂದು ಆಗ್ರಹಿಸಿದರು.

ಆಹಾರ ನಿರೀಕ್ಷಕ ಮಂಜುನಾಥ ತಳ್ಳಿಹಾಳ ಮಾತನಾಡಿ, ‘ಇನ್ನು ಮುಂದೆ ಇಂಥ ಘಟನೆಗಳು ನಡೆಯದಂತೆ ಕ್ರಮ ವಹಿಸುತ್ತೇನೆ ಎಂದರು.

ADVERTISEMENT

ನಂತರ ಮಾತನಾಡಿದ ಹೊಸಳ್ಳಿ ಗ್ರಾಮದ ದಲಿತ ಮುಖಂಡ ಮಲ್ಲು ಮಾದರ, ದಲಿತ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಬೇಕು ಎಂದು ಸರ್ಕಾರ
ನಿಯಮ ಮಾಡಿದ್ದರೂ ಅಧಿಕಾರಿಗಳು ಹಾಗೂ ಇಲಾಖೆಗಳು ನಮಗೆ ಯಾವ ಕಾಮಗಾರಿ ಮಾಡಲು ಗುತ್ತಿಗೆ ನೀಡುತ್ತಿಲ್ಲ. ದಲಿತ ಗುತ್ತಿಗೆದಾರರನ್ನು ಕಡೆಗಣಿ
ಸಲಾಗಿದೆ. ಲೋಕೋಪಯೋಗಿ ಇಲಾಖೆಅಧಿಕಾರಿ ಕೆ.ಎ.ಹದ್ಲಿಯವರು ದಲಿತರನ್ನು ತುಚ್ಛವಾಗಿ ಕಾಣುತ್ತಾರೆ’ ಎಂದರು.

ಮುಖಂಡ ಶರಣಪ್ಪ ದೊಡ್ಡಮನಿ ಮಾತನಾಡಿ, ಸಭೆಗೆ ಅಧಿಕಾರಿಗಳು ಗೈರು ಹಾಜರಿಯಾಗಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ  ಅಧಿಕಾರಿ ಚಳಗೇರಿ, ಸಿಪಿಐ ಕೆ.ಸಿ.ಪ್ರಕಾಶ, ಪಿಎಸ್ಐ ಎಲ್.ಕೆ.ಜೂಲಶ್ರೀಕಟ್ಟಿ, ಸಮಾಜ ಕಲ್ಯಾಣ ಅಧಿಕಾರಿ ಬಿ.ಆರ್.ಬೇವಿನಮರದ, ಬಸವಂತಪ್ಪ ತಳವಾರ, ಸಂಜಯ ದೊಡ್ಡಮನಿ, ವೈ.ಬಿ.ಚೋಳನ್ನವರ, ರಾಜೇಂದ್ರ ನೆಲ್ಲೂರ, ಪ್ರಕಾಶ ಹೊಸಳ್ಳಿ, ವೀರಪ್ಪ ತೆಗ್ಗಿನಮನಿ, ಅರ್ಜುನ ಕೊಪ್ಪಳ, ಬಸವರಾಜ ತಳವಾರ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.