ಗಜೇಂದ್ರಗಡ: ಜೀವನ ಅನಿರೀಕ್ಷಿತ ಘಟನೆಗಳ ಸಂಗಮ~ ಎಂಬ ನಾಲ್ನುಡಿಯಂತೆ ಮನುಷ್ಯನ ಬದುಕಿನಲ್ಲಿ ಕೆಲವೊಮ್ಮೆ ಊಹೆಗೂ ನಿಲುಕದ ಘಟನೆಗಳು ಸಂಭವಿಸುತ್ತವೆ. ಇಂತಹ ಘಟನೆಗಳಿಂದ ಧೃತಿಗೆಟ್ಟು,
ಅಸಹಾಯಕತೆಯಿಂದ ಕೈಚೆಲ್ಲಿ ಅನಿರೀಕ್ಷಿತ ಘಟನೆಗಳಿಗೆ ಬೆನ್ನು ತೋರಿಸಿ ನಿಸ್ಸಹಾಯಕ ಬದುಕು ಸಾಗಿಸುವವರು ಅಗಣಿತ ಸಂಖ್ಯೆಯಲ್ಲಿದ್ದಾರೆ. ಇಂತಹವರ ಮಧ್ಯೆಯೂ ಬಂದ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ, ಹೊಸ ಬದುಕನ್ನು ರೂಪಿಸಿಕೊಂಡವರೂ ಇದ್ದಾರೆ.
ಹೌದು. ಇಂತಹ ಅನೀರಿಕ್ಷಿತ ಘಟನೆಗೆ ಬೆನ್ನು ತೋರಿಸದೆ, ಎದೆಯೊಡ್ಡಿ ಸಾವನ್ನು ಮೆಟ್ಟಿನಿಂತು ಚಿರಂಜಿವಿಯಂತೆ ಬದುಕು ಸಾಗಿಸುತ್ತಿದ್ದಾರೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸೂಡಿ ಗ್ರಾಮದ ಯುವಕ ಆಸಿಫ್ ಮುಲ್ಲಾ ನಿದರ್ಶನ.
ಡಿಪ್ಲೋಮಾ ಪದವಿ ಪಡೆಯುವುದಕ್ಕಾಗಿ ಚಿತ್ರದುರ್ಗದ ಸೆಂಟ್ ಮೇರಿಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2008 ರಲ್ಲಿ ಪ್ರವೇಶ ಪಡೆದು ವ್ಯಾಸಂಗ ಆರಂಭಿಸಿದ ಆಸಿಫ್ ಉತ್ತಮವಾಗಿ ಓದಿ ಅತ್ಯುತ್ತಮಫಲಿತಾಂಶವನ್ನು ಪಡೆದುಕೊಂಡ. ಆದರೆ, ಮೇ 28.2010 ರ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯನ್ನು ಎದುರಿಸುವ ಉದ್ದೇಶದಿಂದ ರಾತ್ರಿ ಹಿಂದಿನ ರಾತ್ರಿ ಪರೀಕ್ಷಾ ತಯಾರಿ ನಡೆಸಿ ಮಲಗಿಕೊಂಡಿದ್ದ.
ಬೆಳಗ್ಗೆ ಎಚ್ಚರಗೊಂಡಾಗ ದುರಾದೃಷ್ಟ ಕಾದಿತ್ತು. ಎರಡೂ ಪಾದ ಹಾಗೂ ಹಿಮ್ಮಡಿಗಳಿಗೆ ಬಲವೇ ಇರಲಿಲ್ಲ. ನಿಲ್ಲಲು ಆಗುತ್ತಿರಲಿಲ್ಲ. ಮೊಣಕಾಲು ಮಡಚಲು ಆಗುತ್ತಿತ್ತು. ಕೈ ಸರಿಯಾಗಿದ್ದವು. ಪಾದವನ್ನು ಸ್ವಲ್ಪವೂ ಅಲುಗಾಡಿಸಲು ಆಗುತ್ತಿರಲ್ಲಿಲ್ಲ.
ಆಸಿಫ್ನ ಪರಿಸ್ಥಿತಿಯ ಗಂಭೀರತೆ ಅರಿತ ಸ್ನೇಹಿತರು ಚಿತ್ರದುರ್ಗದ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಗಂಭೀರವಾಗುತ್ತಾ ಸಾಗಿತು.ಆಸಿಫ್ ನ ತಂದೆ ಅಬ್ದುಲ್ಗಣಿಸಾಬ ಮುಲ್ಲಾ ತರಾತುರಿಯಲ್ಲಿ ಚಿತ್ರದುರ್ಗಕ್ಕೆ ಆಗಮಿಸಿ ವೈದ್ಯರ ಸಲಹೆಯ ಮೆರೆಗೆ ದಾವಣಗೆರೆ ಶಾಮನೂರು ಶಿವಶಂಕ್ರಪ್ಪ ಆಸ್ಪತ್ರೆಗೆ ದಾಖಲಿಸಿದರು.
ಆಸ್ಪತ್ರೆಯಲ್ಲಿ ವೃದ್ಯರು ಕೇವಲ ಮೂರು ಗಂಟೆ ಚಿಕಿತ್ಸೆ ನೀಡಿ ಕಾಯಿಲೆ ಬಗ್ಗೆ ನಿಖರ ಮಾಹಿತಿ ದೊರಕದಿರುವುದಿಂದ ಬೆಂಗಳೂರಿನ ನಿಮ್ಹಾನ್ಸ್ಗೆ ಹೋಗುವಂತೆ ಸಲಹೆ ನೀಡಿದರು. ನಿಮಾನ್ಸ್ಗೆ ದಾಖಲಾದಾಗ ಆಸಿಫ್ನ ಕಾಯಿಗೆ ಬಗ್ಗೆ ಖಚಿತ ಮಾಹಿತಿ ದೊರೆಯಿತು. ಅದುವೇ `ಗಿಲ್ಲೈನ್ ಬಾರ್ ಸಿಂಡ್ರೋಮ್~ ಎಂಬ ಕಾಯಿಲೆ. ಇದನ್ನರಿತ ಪಾಲಕರು ಕಂಗಾಲಾಗಿ ಹೋದರು.
ಗಿಲ್ಲೈನ್ ಬಾರ್ ಉಂಟಾಗಲು ಕಾರಣ: ದೇಹದ ಪ್ರತಿರೋಧಕ ವ್ಯವಸ್ಥೆಯು ತನ್ನದೇ ನರವ್ಯೆಹದ ಮೇಲೆ ದಾಳಿ ಮಾಡುವುದರಿಂದ ಈ ಕಾಯಿಲೆ ಬರುತ್ತದೆ. ಇದನ್ನು ಅನೈಚ್ಛಿಕ ಪ್ರತಿರೋಧಕ ಕಾಯಿಲೆ (ಅಟೋ ಇಮ್ಯೂನ್ ಡಿಸೀಸ್) ಎಂದೂ ಸಹ ಕರೆಯುತ್ತಾರೆ. ಈ ಗಿಲ್ಲೈನ್ ಬಾರ್ ಸಿಂಡ್ರೋಮ್ ಕಾಯಿಲೆಯಲ್ಲಿ ದೇಹದ ಪ್ರತಿರೋಧಕ ವ್ಯವಸ್ಥೆಯು ಕೆಲವು ನರಗಳ ಮೇಲಿರುವ ಪೊರೆಗೆ ಹಾನಿ ಉಂಟು ಮಾಡುತ್ತದೆ.
ಸಿಂಡ್ರೋಮ್ ಕೆರಳುವಿಕೆಗೆ ಕಾರಣ: ಸಾಮಾನ್ಯವಾಗಿ ನಿಮಗೆ ವೈರಲ್ ಅಥವಾ ಬ್ಯಾಕ್ಟೀರಿಯಲ್ ಸೋಂಕು ತಗಲಿದ ನಂತರ, ನರಗಳಿಗೆ ಹಾನಿ ಉಂಟಾಗುತ್ತದೆ. ಹೆಚ್ಚಾಗಿ ಶ್ವಾಸಕೋಶ, ಹೊಟ್ಟೆ ಹಾಗೂ ಕರುಳಿನ ಸೋಂಕು ಕಾಣಿಸಿಕೊಂಡ ಬಳಿಕ ಈ ಕಾಯಿಲೆ ಕೆರಳುವ ಸಾಧ್ಯತೆ ಹೆಚ್ಚು.
ಕಾಯಿಲೆಯ ಲಕ್ಷಣಗಳು: ಕೈ-ಕಾಲು ಜಡವಾಗುವುದು ಅಥವಾ ಇರುವೆ ಹರಿದಾಡುವಂತಾಗುವುದು, ಕೆಲವು ಸಲ ಬಾಯಿ ಹಾಗೂ ತುಟಿಯ ಸುತ್ತಲೂ ಇದೇ ರೀತಿ ಆಗುವುದು. ಕೈ-ಕಾಲು ಹಾಗೂ ಮುಖದ ಬದಿಗಳಲ್ಲಿ ಸ್ನಾಯು ದುರ್ಬಲಗೊಳ್ಳವುದು. ಕಣ್ಣುಗಳನ್ನು ಅತ್ತಿತ ಚಲಾಯಿಸಲು ಅಸಾಧ್ಯವಾಗುವುದು. ಮಾತನಾಡಲು , ಜಗಿಯಲು ಹಾಗೂ ಆಹಾರ ನುಂಗಲು ಕಷ್ಟವಾಗುವುದು. ಬೆನ್ನು ನೋವು, ಸಾಮಾನ್ಯವಾಗಿ ಕೈ-ಕಾಲಿನ ಬೆರಳುಗಳು ಮರಗಟ್ಟುವುದು ಅಥವಾ ಜಡವಾಗುವುದು.
3 ತಿಂಗಳ ಚಿಕಿತ್ಸೆ: ಕಾಯಿಲೆಗೆ ಒಳಗಾಗಿದ್ದ ಬದುಕಿಯೂ ಸತ್ತಂತೆ ನಿಮ್ಹಾನ್ಸ್ನಲ್ಲಿ ಸುದೀರ್ಘ ಮೂರು ತಿಂಗಳು ಮೂರು ದಿನ ಚಿಕಿತ್ಸೆ ಪಡೆದರೂ ನಡೆಯಲಾಗದ ಸ್ಥಿತಿಯಲ್ಲಿ ಸೂಡಿ ಗ್ರಾಮಕ್ಕೆ ಮರಳಿದರು. ತಂದೆ ಅಬ್ದುಲ್ಗಣಿಸಾಬ ಅವರ ಕಠಿಣ ಪರಿಶ್ರಮದಿಂದ ಆಸಿಫ್ಗೆ ನಿತ್ಯ ವ್ಯಾಯಾಮ ಮಾಡಿಸುತ್ತಿದ್ದರು.
ಪರಿಣಾಮ ಒಂದು ವರ್ಷದ ಬಳಿಕ ನಡೆಯಲು ಆರಂಭಿಸಿದರು. ಆಸಿಫ್ ಗುಣಮುಖ ಆಗೋದೆ ಕಷ್ಟ ಸಾಧ್ಯ ಎನ್ನುವಷ್ಟರ ಮಟ್ಟಿಗೆ ಕುಸಿದು ಹೋಗಿದ್ದ. ಆರೋಗ್ಯ ಒಂದು ವರ್ಷದ ಬಳಿಕ ಸುಧಾರಣೆಯಾಗಿದೆ. ಸಾವನ್ನು ಗೆದ್ದು ಚಿರಂಜಿವಿಯಾಗಿದ್ದಾನೆ.
ಕಾಯಿಲೆಯಿಂದ ಪೂರ್ಣ ಪ್ರಮಾಣದಲ್ಲಿ ಗುಣಮುಖರಾದ ಆಸಿಫ್ ಡಿಪ್ಲೋಮಾ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಕ್ಯಾಂಪಸ್ ಸಂದರ್ಶನದಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಅವಕಾಶ ದೊರೆತರೂ ಪಾಲಕರ ಮನವಿ ಮೇರೆಗೆ ಆಸಿಫ್ ಉದ್ಯೋಗವನ್ನು ತಿರಸ್ಕರಿಸಿದ್ದಾರೆ.
ಸದ್ಯ ರೋಣದ ತಾಲ್ಲೂಕು ಸಹಕಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಲೂ ನಿತ್ಯ ನಸುಕಿನ 5.30 ಗಂಟೆಗೆ ಎದ್ದು, ಗ್ರಾಮದ ಹೊರವಲಯದಲ್ಲಿ ಏಕಾಂಗಿಯಾಗಿ ದೇಹವನ್ನು ದಂಡಿಸುವ ಆಸಿಫ್ ಆರೋಗ್ಯಯುವ ಬದುಕು ಸಾಗಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.