ಗದಗ: ಮೂರು ತಿಂಗಳ ಬಳಿಕ ಸೋಮವಾರ ಇಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ, ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ ಮತ್ತು ಸಿಇಒ ಮಂಜುನಾಥ ಚವ್ಹಾಣ ತರಾಟೆಗೆ ತೆಗೆದುಕೊಂಡರು.
ಕೃಷಿ ಇಲಾಖೆ ವಿವಿಧ ಯೋಜನೆ ಗಳಡಿ ರೈತರಿಗೆ ನೀಡಿರುವ ಸಬ್ಸಿಡಿ ಕುರಿತು ಸಭೆಗೆ ಸೂಕ್ತ ಮಾಹಿತಿ ಒದಗಿ ಸದ ಜಂಟಿ ಕೃಷಿ ನಿರ್ದೇಶಕ ಹಾಗೂ ಸಮರ್ಪಕ ಉತ್ತರ ನೀಡದ ಪಶು ಇಲಾಖೆ ಉಪನಿರ್ದೇಶಕರ ವಿರುದ್ಧ ಸಿಇಒ ಕೆಂಡಾಮಂಡಲರಾದರು.
‘ಕಳೆದ ಸಭೆಯಲ್ಲಿ ಸೂಚಿಸಿದಂತೆ ಮಾಹಿತಿ ತಂದಿದ್ದೀರಾ ಎಂದು ಸಿಇಒ, ಕೃಷಿ ಇಲಾಖೆ ಜಂಟಿ ನಿರ್ದೇಶ ಸಿ.ಬಿ ಬಾಲರೆಡ್ಡಿ ಅವರನ್ನು ಪ್ರಶ್ನಿಸಿದರು. ಸಭೆಗೆ ಹಾಜರಾಗುವಾಗ ಮಾಹಿತಿ ತೆಗೆದುಕೊಂಡು ಬರೋಕಾಗಲ್ವ, ಸೆನ್ಸ್ ಇಲ್ವಾ ಎಂದು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಅಲ್ಲದೇ, ಗಿರಿರಾಜ ಕೋಳಿ ವಿತರಣೆಗೆ ಸಂಬಂಧಿಸಿದಂತೆ ಪಶು ಇಲಾಖೆ ಉಪನಿರ್ದೇಶಕ ನರಸಿಂಹ ಎಂ ಅವರಿಗೆ ಪಾಠ ಮಾಡಿದರು.
‘2017ರ ಜುಲೈನಲ್ಲಿ ಆರೋಗ್ಯ ಇಲಾಖೆಗೆ ₹1.60 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ, 2018ರ ಮಾರ್ಚ್ ವರೆಗೆ ಯಾವುದೇ ಟೆಂಡರ್ ಕರೆದಿಲ್ಲ. ಖಾತೆಯಲ್ಲೇ ಹಣ ಇಟ್ಟುಕೊಳ್ಳಲಾಗಿತ್ತು.ಇದಕ್ಕೆ ಕಾರಣವೇನು, ಮಾರ್ಚ್ ನಂತರ ತರಾತುರಿಯಲ್ಲಿ ₹1.20 ಕೋಟಿ ಬಿಡುಗಡೆ ಮಾಡಲಾಯಿತು. ಈ ಮೊತ್ತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಇತರೆ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಯಾವ ಯಾವ ಸೌಲಭ್ಯಗಳಿಗೆ ಒದಗಿಸ ಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿ’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುಡರಗಿ, ಜಿಲ್ಲಾ ಆರೋಗ್ಯ ಅಧಿಕಾರಿಗೆ ಸೂಚಿಸಿದರು.
ಸಭೆ ಮುಂದಕ್ಕೆ
ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯುತ್ತಿದ್ದ ವೇಳೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ಅಧ್ಯಕ್ಷ ವಾಸಣ್ಣ ಕುರಡಗಿ, ಮಾಹಿತಿ ನೀಡದೆ ಸಭೆ ನಡೆಸಲಾಗುವುದಿಲ್ಲ. ಸಭೆಯನ್ನು ಮುಂದೂಡುವಂತೆ ಸೂಚಿಸಿದರು. ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಸಿದ ಸಿಇಒ ಮಂಜುನಾಥ ಚವ್ಹಾಣ ಅವರು, ಜೂನ್ 18 ರೊಳಗೆ ಮಾಹಿತಿ ಸಿದ್ಧವಾಗಿ ಇಟ್ಟುಕೊಳ್ಳಬೇಕು. ಅಂದೇ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.