ADVERTISEMENT

ಸಿಇಟಿ ಶುಲ್ಕ ಹೆಚ್ಚಳ: ಎಬಿವಿಪಿ ರಸ್ತೆತಡೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 6:13 IST
Last Updated 19 ಡಿಸೆಂಬರ್ 2013, 6:13 IST

ಗದಗ: ರಾಜ್ಯ ಸರ್ಕಾರ 2006 ರ ಸಿ.ಇ.ಟಿ. ಕಾಯಿದೆ  ಜಾರಿಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ನಗರದ ಕಾಲೇಜು ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಕೆ.ವಿ.ಎಸ್.ಆರ್. ಕಾಲೇಜಿ ನಿಂದ ವಿದ್ಯಾರ್ಥಿಗಳು ಮೆರವಣಿಗೆ ಹೊರಟು ಕೆ.ಸಿ.ರಾಣಿ ರಸ್ತೆ ಮೂಲಕ ರಾಜ್ಯ ಗಾಂಧಿ ವೃತ್ತ ತಲುಪಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದರು.

ಸಿಇಟಿ ಕಾಯಿದೆ ಜಾರಿಯಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಲು ವಿಫಲವಾದ ಸರ್ಕಾರ  ಶೈಕ್ಷಣಿಕ ಹಕ್ಕನ್ನು ಮೊಟಕು ಗೊಳಿಸುತ್ತಿದೆ.

  ಸರ್ಕಾರದ ನೀತಿ ವಿದ್ಯಾರ್ಥಿ ಹಾಗೂ ಶೈಕ್ಷಣಿಕ ವಿರೋಧಿ ಯಾಗಿದೆ. ಈ ಕಾಯ್ದೆಯಿಂದ ಪ್ರಸ್ತುತ ಸರ್ಕಾರಿ ಕೋಟಾದಲ್ಲಿರುವ ಎಂಜಿನಿಯರಿಂಗ್‌ ಶೇ. 45, ಮೆಡಿಕಲ್‌ ಶೇ. 40, ದಂತ ವೈದ್ಯಕೀಯ ಶೇ. 35 ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಿದ್ದು, ಯಾವುದೇ ಖಾಸಗಿ ಅನುದಾನರಹಿತ ಕಾಲೇಜಿನಲ್ಲಿ  ಸರ್ಕಾರಿ ಕೋಟಾ ಸೀಟುಗಳು ಇಲ್ಲದಂ ತಾಗಿದೆ. ಕಾಮೆಡ್‌ –ಕೆ ನಡೆಸುವ ಪ್ರವೇಶ ಪರೀಕ್ಷೆಯ ಬಗ್ಗೆ ಹಲವಾರು ದೂರುಗಳಿದ್ದು, ಅಂತಹುದರಲ್ಲಿ  ಉಳಿದ  (ಸರ್ಕಾರಿ) ಸೀಟುಗಳಿಗೂ ಪರೀಕ್ಷೆ ನಡೆಸಲು ಕಾಮೆಡ್ ಕೆ ಗೆ ಬಿಟ್ಟುಕೊಡುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಸಂಸ್ಥೆಗಳಿಗೆ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಲು ಅನುಕೂಲವಾಗುತ್ತದೆ. ಖಾಸಗಿ ವೈದ್ಯಕೀಯ, ದಂತ, ಎಂಜಿನಿಯರಿಂಗ್, ಯುನಾನಿ, ಆಯುರ್ವೇದ, ಯೋಗ, ನ್ಯಾಚರೋಪತಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳಿಗೆ ಪ್ರವೇಶ ಶುಲ್ಕ ಕುರಿತಂತೆ ಸರ್ಕಾರದ ಪೂರ್ಣ ನಿಯಂತ್ರಣ ತಪ್ಪಿ, ಖಾಸಗಿ ಆಡಳಿತ ಮಂಡಳಿಗೆ ಪರಮಾಧಿಕಾರ ಕೊಟ್ಟಂತಾ ಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

210 ಎಂಜಿನಿಯರಿಂಗ್ ಕಾಲೇಜು ಗಳಲ್ಲಿ 21 ಮತ್ತು 32 ವೈದ್ಯಕೀಯ ಕಾಲೇಜುಗಳಲ್ಲಿ 10 ಕಾಲೇಜುಗಳಲ್ಲಿನ ಸುಮಾರು 5000 ಸೀಟುಗಳಿಗೆ ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರವೇಶ ಪರೀಕ್ಷೆ ನಡೆಸಲಿದೆ. ಉಳಿದ ಸುಮಾರು 75 ಸಾವಿರ ಸೀಟುಗಳಿಗೆ ಕಾಮೆಡ್ ಕೆ ಪರೀಕ್ಷೆ ನಡೆಸುವುದರಿಂದ ಕಳ್ಳನ ಕೈಗೆ ಕೀಲಿ ಕೊಟ್ಟಂತೆ ಆಗುತ್ತದೆ.  ಕಾಮೆಡ್ ಕೆ ಈ ಹಿಂದೆ ನಡೆಸಿದ ಪ್ರವೇಶ ಅವ್ಯವಹಾರಗಳೇ ಇದಕ್ಕೆ ಸಾಕ್ಷಿ. ಆದ್ದರಿಂದ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮೀಸಿ, ಮಾಂತೇಶ ಮಾಳಗಿಮನಿ, ಕಿರಣ, ವಿಠ್ಠಲ,ರವಿ, ಉಮೇಶ, ಹನಮಂತ, ವಿದ್ಯಾ, ಶಶಿಕಲಾ ಗುಡಿ, ರೇಖಾ, ಸುಜಾತಾ, ಅಣ್ಣಪ್ಪ, ಸುಮಾ, ದೀಪಾ, ಶೃತಿ, ಭಾಗ್ಯಾ, ಗೀತಾ, ನೇತ್ರಾ, ವಿಜಯಲಕ್ಷ್ಮೀ, ರಾಘವೇಂದ್ರ, ಚಂದ್ರಶೇಖರ, ಪ್ರಕಾಶ, ರವಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.