ADVERTISEMENT

ಸಿಗದ ವೇತನ: ಸಿಬ್ಬಂದಿ ತತ್ತರ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 9:35 IST
Last Updated 16 ಮಾರ್ಚ್ 2012, 9:35 IST

ಲಕ್ಷ್ಮೇಶ್ವರ: ಕಳೆದ ಎರಡು ತಿಂಗಳಿಂದ ಸಂಬಳ ದೊರೆಯದ ಹಿನ್ನೆಲೆಯಲ್ಲಿ ಆಧಾರ ಯೋಜನೆ ಸಿಬ್ಬಂದಿ ಮೆರವಣಿಗೆ ನಡೆಸುವುದರ ಮೂಲಕ ಪ್ರತಿಭಟನೆ ನಡೆಸಿದರು. 

ಪಟ್ಟಣದ ಶಿಗ್ಲಿ ನಾಕಾದಿಂದ ಮೆರವಣಿಗೆ ಆರಂಭಿಸಿದ ಸಿಬ್ಬಂದಿ ಪುರಸಭೆ, ಸೋಮೇಶ್ವರ ಪಾದಗಟ್ಟೆ, ಬಜಾರ್, ಹಾವಳಿ ಹನುಮಂತ ದೇವರ ದೇವಸ್ಥಾನದ ಮೂಲಕ ವಿಶೇಷ ತಹಶೀಲ್ದಾರರ ಕಚೇರಿಗೆ ಆಗಮಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಎಆಯ್‌ಟಿಯುಸಿ ಪ್ರತಿನಿಧಿ ವಿಠ್ಠಲ ನಾಯಕ `ಕಷ್ಟಪಟ್ಟು ಕೆಲಸ ಮಾಡಿದರೂ ವೇತನ ನೀಡದೆ ಸತಾಯಿಸುತ್ತಿರುವ ಗ್ಲೋಡೈನ್ ಟೆಕ್ನಿ ಸರ್ವೀಸ್ ಕಂಪನಿ ಹಠಮಾರಿ ಧೋರಣೆಯಿಂದಾಗಿ ಸಿಬ್ಬಂದಿ ಗೋಳಾಡು ತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರಣ ಎರಡು ತಿಂಗಳ ವೇತನ ನೀಡುವಂತೆ ಕಂಪೆನಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಇಎಸ್‌ಐ ಹಾಗೂ ಪಿಎಫ್ ಹಣವನ್ನು ನೀಡಬೇಕು. ಮತ್ತು ಸಿಬ್ಬಂದಿಗೆ ವೇತನ ನೀಡದೆ ಸತಾಯಿಸುತ್ತಿರುವ ಕಂಪೆನಿ ಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು~ ಎಂದು ಆಗ್ರಹಿಸಿದರು. 

 `ಸದ್ಯ ಬಂದ್ ಆಗಿರುವ ಆಧಾರ ಯೋಜನೆ ಯನ್ನು ಪುನಃ ಆರಂಭಿಸಿ ಸಿಬ್ಬಂದಿ ಹಿತಾಸಕ್ತಿ ಕಾಪಾಡಬೇಕು~ ಎಂದು  ಒತ್ತಾಯಿಸಿದರು.

ಹನಮಂತಪ್ಪ ತಾಂಬೆ, ಗಿರಿಮಲ್ಲಯ್ಯ ಹಿರೇಮಠ, ಶಿವಾನಂದ ಸಂಶಿ, ಸಂತೋಷ ನಾಯಕ, ಮಂಜುನಾಥ ಕೂಸನೂರ, ಮೃತ್ಯುಂಜಯ ಪಾಟೀಲ, ಶ್ವೇತಾ ಯರ್ಲಗಟ್ಟಿ, ಸೌಮ್ಯಶ್ರೀ ಕೊಪ್ಪದ, ನಾಗರಾಜ ಅಗಸಿಬಾಗಲ, ಲಾಲ್‌ಸಾಬ್ ಅಕ್ಕೂರ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವಿಶೇಷ ತಹಶೀಲ್ದಾರ ಸಿಬ್ಬಂದಿ ಕೆ.ಆರ್.ಆರೇರ ಮನವಿ ಸ್ವೀಕರಿಸಿದರು.

ಪ್ರತಿಭಟನೆ
ಆಧಾರ ಯೋಜನೆಯಡಿ ಕೆಲಸ ಮಾಡಿದ ಸಿಬ್ಬಂದಿಗೆ ಕಳೆದ ಎರಡು ತಿಂಗಳಿಂದ ಸಂಬಳ ನೀಡಿಲ್ಲ ಎಂದು ಆರೋಪಿಸಿ ಶಿರಹಟ್ಟಿಯಲ್ಲಿ ಆಧಾರ ಯೋಜನೆ ಸಿಬ್ಬಂದಿ ತಾಲ್ಲೂಕು ಅಭಿವೃದ್ಧಿ ವೇದಿಕೆ ಸಹಯೋಗದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.   

ಈ ಸಂದರ್ಭದಲ್ಲಿ ಅಧ್ಯಕ್ಷ ಫಕ್ಕೀರೇಶ ನಿಟ್ಟಾಲಿ, ಗೌರವ ಕಾರ್ಯದರ್ಶಿ ಎಂ.ಕೆ. ಲಮಾಣಿ, ಪರಶುರಾಮ ಭಜಂತ್ರಿ, ರವಿ ಕದಂ, ಮಂಜು ಭೋಜ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.