ADVERTISEMENT

ಹುಣಸಿಕಟ್ಟಿ: ಹೆಸ್ಕಾಂ ಕಚೇರಿ ಬೀಗ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 4:35 IST
Last Updated 24 ಸೆಪ್ಟೆಂಬರ್ 2011, 4:35 IST
ಹುಣಸಿಕಟ್ಟಿ: ಹೆಸ್ಕಾಂ ಕಚೇರಿ ಬೀಗ: ಪ್ರತಿಭಟನೆ
ಹುಣಸಿಕಟ್ಟಿ: ಹೆಸ್ಕಾಂ ಕಚೇರಿ ಬೀಗ: ಪ್ರತಿಭಟನೆ   

ನರಗುಂದ: ತಾಲ್ಲೂಕಿನ ಹುಣಸಿಕಟ್ಟಿಯ ವ್ಯಾಪ್ತಿಯ ಜಮೀನುಗಳ ಪಂಪ್‌ಸೆಟ್‌ಗಳಿಗೆ ಟಿಸಿ ಅಳವಡಿಸಲು ಮನವಿ ಸಲ್ಲಿಸಿ  ಎರಡು ವರ್ಷವಾದರೂ ಟಿಸಿ ಅಳವಡಿಸದೇ ಇರುವುದಕ್ಕೆ ಆಕ್ರೋಶಗೊಂಡ ರೈತರು ಪಟ್ಟಣದ ಹೆಸ್ಕಾಂ ಕಚೇರಿಗೆ ಶುಕ್ರವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಎರಡು ವರ್ಷಗಳ ಹಿಂದೆಯೇ ಟಿಸಿ ಅಳವಡಿಸಲು ದಾಖಲಾತಿಗಳನ್ನು ತುಂಬಲಾಗಿದೆ. ಆದರೆ ಅದರ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಲಕ್ಷವಹಿಸುತ್ತಿಲ್ಲ. ಹೀಗಾದರೆ  ರೈತರು ಪಂಪಸೆಟ್ ಮೂಲಕ ನೀರನ್ನು  ಜಮೀನುಗಳಿಗೆ ಹರಿಸುವುದು ಎಂದು ಇದಕ್ಕೆ ಆಕ್ರೋಶಗೊಂಡ ರೈತರು ಏಕಾಏಕಿ ಹೆಸ್ಕಾಂ ಕಚೇರಿಗೆ ಆಗಮಿಸಿ ಧರಣಿ ಕೈಗೊಂಡು ಬೀಗ ಜಡಿದೇ ಬಿಟ್ಟರು.

ನಮಗೆ ಬೇಗನೇ ಟಿಸಿ ಅಳವಡಿಸುವ ಭರವಸೆ ನೀಡುವವರೆಗೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ರೈತರು ಪಟ್ಟು ಹಿಡಿದದ್ದು ಕಂಡು ಬಂತು. ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದರ ಬಗ್ಗೆ ಹೆಸ್ಕಾಂ ಅಧಿಕಾರಿ ಸಗರಿ ಇದರ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ.

ಆದರೆ ಇದು ಈ ವರ್ಷದ ಅನುದಾನದಲ್ಲಿ ಕೈಗೊಳ್ಳಲು ಸಾಧ್ಯವಿಲ್ಲ. ಆದರೂ ರೈತರೊಡಗೂಡಿ ಹುಬ್ಬಳ್ಳಿ ಕಚೇರಿಗೆ ತೆರಳಿ ಮನವಿ ಸಲ್ಲಿಸೋಣ ಎಂದು ಹೇಳಿದರು. 

ಇಷ್ಟಕ್ಕೂ ಸಾಲದೇ ಅಲ್ಲಿಂದ ತಹಸೀಲ್ದಾರ ಕಚೇರಿಗೆ ಆಗಮಿಸಿದ ರೈತರು ಇದರ ಬಗ್ಗೆ ಶೀಘ್ರವೇ ಕ್ರಮ ಕೈಗೊಂಡು ರೈತರ ಸಹಾಯಕ್ಕೆ ತಾಲ್ಲೂಕು ಆಡಳಿತ ಬರಬೇಕು. ಇಲ್ಲವಾದರೆ ತಹಸೀಲ್ದಾರ ಕಚೇರಿ ಎದರು ಅನಿರ್ದಿಷ್ಟ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು.

`ರೈತನನ್ನು ಯಾವಾಗಲೂ ಅಸಡ್ಡೆಯಿಂದ ನೋಡುವ ಅಧಿಕಾರಿಗಳ ಬಗ್ಗೆ ಬೇಸತ್ತು ಹೋಗಿದೆ. ಹಿಂಗಾರಿ ಬೆಳೆಗಳಿಗೆ ಬೇಕಾದ ಯೂರಿಯಾ ಗೊಬ್ಬರಕ್ಕಾಗಿ ಪಟ್ಟಣದಲ್ಲಿ ಆಹಾಕಾರ ಆರಂಭವಾಗಿದ್ದರೂ ಕೃಷಿ ಇಲಾಖೆ ನಿರ್ಲಕ್ಷ್ಯ ತೋರಿದೆ.  ಜೊತೆಗೆ ಹುಣಸಿಕಟ್ಟಿಯಲ್ಲಿ ಗೇಲ್ ಕಂಪನಿ ಪರಿಹಾರ ನೀಡದೇ ಪೈಪ್ ಅಳವಡಿಸಿದ್ದರೂ ತಾಲ್ಲೂಕು ಆಡಳಿತ ಮೌನವಹಿಸಿದೆ ಎಂದು ರೈತರು ಕಿಡಿಕಾರಿದರು. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಡಾ. ಎಸ್.ಬಿ. ಚೌಕಿಮಠ, ಗಂಗಾಧರ ಮೇಟಿ, ನವೀನ ಪಾಟೀಲ, ಬಸವರಾಜ  ಸಾಬಳೆ ಸೇರಿದಂತೆ ಹುಣಸಿಕಟ್ಟಿಯ ಹಲವು ರೈತರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.