ADVERTISEMENT

ಉದ್ಯಮ ಸ್ಥಾಪನೆಗೆ ₹15 ಲಕ್ಷ ಸಾಲ: ದುರಗೇಶ್.ಕೆ.ಆರ್.

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೆ ಸಹಾಯಧನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 6:25 IST
Last Updated 21 ಸೆಪ್ಟೆಂಬರ್ 2025, 6:25 IST
   

ಪ್ರಜಾವಾಣಿ ವಾರ್ತೆ

ಗದಗ: ಆತ್ಮನಿರ್ಭರ ಭಾರತ ಅಭಿಯಾನ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ನೀಡುವ ಸಹಾಯಧನ ಯೋಜನೆಯಾಗಿದೆ. ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಹಾಗೂ ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಅವಕಾಶವಿರುತ್ತದೆ. ಬ್ಯಾಂಕ್ ಸಾಲದೊಂದಿಗೆ ಶೇ50 ರಷ್ಟು ಸಹಾಯಧನ, ಗರಿಷ್ಟ ₹15 ಲಕ್ಷಗಳವರೆಗೆ ಸಹಾಯಧನವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ್.ಕೆ.ಆರ್.ತಿಳಿಸಿದರು.

ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮ), ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಮತ್ತು ಕೆಪೆಕ್ ಲಿಮಿಟೆಡ್ ಬೆಂಗಳೂರು ಜಂಟಿ ಸಹಯೋಗದೊಂದಿಗೆ ಪಿಎಂಎಫ್‌ಎಂಇ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ADVERTISEMENT

ರೈತರು ಕೃಷಿ ಮಾಡುವ ಸಂದರ್ಭದಲ್ಲಿ ಯಾವ ಬೆಳೆ ಬೆಳೆದರೆ ಆರ್ಥಿಕತೆಯಿಂದ ಮುಂದೆ ಬರಲು ಸಾಧ್ಯ ಎಂಬುದನ್ನು ವಿಚಾರ ಮಾಡಿ ಆದುನಿಕ ತಂತ್ರಜ್ಷಾನ ಅಳವಡಿಕೆ ಮಾಡಿಕೊಂಡು ಕೃಷಿ ಮಾಡಿದಾಗ ನಷ್ಟ ಆಗಲಾರದು ಎಂದರು.

ರೈತರು ಆರ್ಥಿಕವಾಗಿ ಸಬಲರಾಗಬೇಕಾದರೆ ಹಾಗೂ ಕೃಷಿ ಮಾಡುವ ಸಂದರ್ಭದಲ್ಲಿ ಕೃಷಿ ವಿಶ್ವ ವಿದ್ಯಾಲಯದ ಹಾಗೂ ಕೃಷಿ ಇಲಾಖೆಯ ಮಾರ್ಗದರ್ಶನ ಪಡೆದುಕೊಳ್ಳುವುದು ಮುಖ್ಯವಾಗಿದೆ. ಆತ್ಮ ನಿರ್ಭರ ಯೋಜನೆಯ ಲಾಭವನ್ನು ಎಲ್ಲ ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು. ಬೇಕರಿ ಉದ್ದಿಮೆ, ಖಾರ ಪುಡಿ ತಯಾರಿಕೆ ಹೊಸ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪ್ರಾರಂಭಿಸಲು ಪ್ರೊಜೆಕ್ಟ್ ತಯಾರಿಸಿ ಕೃಷಿ ಇಲಾಖೆಗೆ ಸಲ್ಲಿಸಿದಾಗ ಸೂಕ್ತ ಮಾರ್ಗದರ್ಶನದಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಈ ಕಾರ್ಯಾಗಾರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ. ಆರ್. ಮುಂಡರಗಿ ಮಾತನಾಡಿ, ಪಿಎಂಎಫ್‌ಎಂಇ ಒಂದು ಉಪಯುಕ್ತವಾದ ಯೋಜನೆ. ಫಲಾನುಭವಿಗಳಿಗೆ ಸಾಲ ನೀಡುವಲ್ಲಿ ಬ್ಯಾಂಕ್ ಗಳು ಸಹಕರಿಸುತ್ತವೆ. ಬೇಡಿಕೆಗನುಸಾರವಾಗಿ ರೈತರು ಬೆಳೆ ಬೆಳೆದು ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದರು.

ಉದ್ದಿಮೆದಾರರಾದ ಮುಳಗುಂದದ ರಾಜೇಶ್ವರಿ ಬಡ್ನಿ, ವಾಸುದೇವ ಇಲ್ಲೂರು ಹಾಗೂ ಇತರರು ತಮ್ಮ ಅನುಭವಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಉಪಾಧ್ಯಕ್ಷ ಹೂವಣ್ಣವರ, ಜಿಲ್ಲಾ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಅರಹುಣಸಿ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ವೀರೇಂದ್ರ ಪಾಟೀಲ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಂತೋಷ.ಎಂ, ಕೆಪೆಕ್ ಸಂಸ್ಥೆಯ ವಿಘ್ನೇಶ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಹುಲಗಣ್ಣವರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳಾರಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಕೃಷಿ ವಿಜ್ಞಾನ ಕೇಂದ್ರದ ವಿನಾಯಕ ಸೇರಿದಂತೆ ಕೃಷಿ ಇಲಾಖೆಯ ಉಪನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, ಅಧಿಕಾರಿಗಳು, ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.