ಕಂಪ್ಲಿ: ಮುಂಬರುವ ಮೂರು ತಿಂಗಳಲ್ಲಿ ಕರ್ಣಾಟಕ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭಿಸಲಿದೆ ಎಂದು ಕರ್ಣಾಟಕ ಬ್ಯಾಂಕ್ ಮಹಾ ಪ್ರಬಂಧಕ ಜೈರಾಮ್ ಹಂದೆ ತಿಳಿಸಿದರು.ಪಟ್ಟಣದ ಎಂ.ಆರ್ ಪ್ಲಾಜಾದಲ್ಲಿ ಸೋಮವಾರ ಜರುಗಿದ ಕರ್ಣಾಟಕ ಬ್ಯಾಂಕ್ ನೂತನ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಬ್ಯಾಂಕ್ ಇಲ್ಲಿಯವರೆಗೆ ಗ್ರಾಹಕರಿಂದ ರೂ. 31 ಸಾವಿರ ಕೋಟಿ ಠೇವಣೆ ಸಂಗ್ರಹಿಸಿದೆ. ಅದೇ ರೀತಿ ರೂ. 20ಸಾವಿರ ಕೋಟಿ ಸಾಲ ನೀಡಿದ್ದು, ಗ್ರಾಹಕ ಮತ್ತು ರೈತ ಸ್ನೇಹಿ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಆರ್ಥಿಕ ವರ್ಷ ಅಂತ್ಯಕ್ಕೆ ರೂ. 250ಕೋಟಿ ಲಾಭಾಂಶ ಗುರಿ ಹೊಂದಲು ಬ್ಯಾಂಕ್ ಉದ್ದೇಶಿಸಿದೆ ಎಂದರು.
ಬ್ಯಾಂಕ್ ವ್ಯವಹಾರ ಸದ್ಯ ರೂ. 51ಸಾವಿರ ಕೋಟಿ ಮಿಕ್ಕಿದ್ದು, ಮಾ.31ರ ಆರ್ಥಿಕ ವರ್ಷ ಅಂತ್ಯಕ್ಕೆ ರೂ. 54ಸಾವಿರ ಕೋಟಿ ಗುರಿ ಹೊಂದಲಿದೆ. ಬ್ಯಾಂಕ್ ರೂ. 2450 ಕೋಟಿ ಸ್ವಂತ ಬಂಡವಾಳ ಹೊಂದಿದೆ ಎಂದು ವಿವರಿಸಿದರು.
ಪಟ್ಟಣದ ನೂತನ ಶಾಖೆ ಪ್ರಗತಿಗೆ ಸ್ಥಳೀಯರು ಸಹಕರಿಸುವಂತೆ ಮನವಿ ಮಾಡಿದರು. ಪುರಸಭೆ ಸದಸ್ಯ ಹಾಗೂ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಕರ್ಣಾಟಕ ಬ್ಯಾಂಕ್ 494ನೇ ಶಾಖೆಯನ್ನು ಉದ್ಘಾಟಿಸಿದರು. ಕಲ್ಮಠದ ಅಭಿನವ ಪ್ರಭು ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಹುಬ್ಬಳ್ಳಿ ಸಹಾಯಕ ಮಹಾ ಪ್ರಬಂಧಕ ಎಚ್.ಎಸ್. ರುದ್ರಯ್ಯ, ಶಿವಮೊಗ್ಗ ಪ್ರಾದೇಶಿಕ ಕಚೇರಿ ಸಹಾಯಕ ಮಹಾ ಪ್ರಬಂಧಕ ರಂಗನಾಥ, ಎಂ.ಆರ್. ಶೇಟ್ ಬ್ಯಾಂಕ್ ಸಿಬ್ಬಂದಿ ಹಾಜರಿದ್ದರು.ಮೈತ್ರಿ ಪ್ರಾರ್ಥಿಸಿದರು, ಆದರ್ಶ ಕಾರ್ಯಕ್ರಮ ನಿರೂಪಿಸಿದರು, ಶಾಖಾ ಪ್ರಬಂಧಕ ಬಿ.ಎಸ್. ರಘುನಾಥ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.