ಗದಗ: ‘ಫೆ.6ರಂದು ಕಪ್ಪತಗುಡ್ಡದಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯು ಮಾನವ ಕೃತ್ಯ. ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ಸಿಬ್ಬಂದಿ ದೂರದಿಂದ ಗಮನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ’ ಎಂದು ಗದಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಶ್ನಿ ಹೇಳಿದರು.
ಕಪ್ಪತಗುಡ್ಡದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಸ್ಥಳಕ್ಕೆ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭೇಟಿ ನೀಡಿದ ಅವರು, ‘ಬೆಂಕಿ ಹರಡುವುದನ್ನು ತಡೆಯಲು ನಿರ್ಮಿಸಿದ್ದ ಬೆಂಕಿರೇಖೆ (ಫೈರ್ಲೈನ್) ದಾಟಿಕೊಂಡು ಅಂದು ಬೆಂಕಿ ಹೊತ್ತಿಕೊಂಡಿದೆ. ಇದ ಮಾನವ ಕೃತ್ಯ ಎನ್ನುವುದು ಸ್ಪಷ್ಟವಾಗುತ್ತದೆ’ ಎಂದರು.
‘ಈ ಬಾರಿ ಹೆಚ್ಚುವರಿಯಾಗಿ 174 ಕಿ.ಮೀ. ಬೆಂಕಿ ರೇಖೆ ನಿರ್ಮಿಸಲಾಗಿದ್ದು, ಕಳೆದ ವರ್ಷ ನಿರ್ಮಿಸಿದ್ದ 178 ಕಿ.ಮೀ. ಬೆಂಕಿರೇಖೆಯನ್ನು ನಿರ್ವಹಿಸಲಾಗಿದೆ. ಗುಡ್ಡದಲ್ಲೇ 7 ಬೆಂಕಿ ನಿಯಂತ್ರಣ ಶಿಬಿರ ತೆರೆಯಲಾಗಿದ್ದು, ಪ್ರತಿ ಶಿಬಿರದಲ್ಲೂ ಕಾವಲಿಗೆ ಹಗಲು ಮತ್ತು ರಾತ್ರಿ ತಲಾ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕಳೆದ ವರ್ಷ ಮುಂಡರಗಿ ತಾಲ್ಲೂಕಿನ ಬಿಡನಾಳ, ವಿರುಪಾಪುರ, ಮಾಚೇನಹಳ್ಳಿ ಪ್ರದೇಶಗಳಲ್ಲಿ ಸಂಭವಿಸಿದ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ ಎರಡು ಗಾಳಿ ವಿದ್ಯುತ್ ಕಂಪನಿಗಳ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದರು.
* *
ಬೆಂಕಿ ನಿಯಂತ್ರಿಸಲು ಅಗತ್ಯ ಇರುವ ಸಲಕರಣೆಗಳನ್ನು ಸಿಬ್ಬಂದಿಗೆ ಪೂರೈಸಲಾಗಿದೆ
ಸೋನಲ್ ವೃಶ್ನಿ
ಉಪ ಅರಣ್ಯ ಸಂರಕ್ಷಣಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.