ನರೇಗಲ್: ಧಾರ್ಮಿಕ, ಆಧಾತ್ಮಿಕ ಕಾರ್ಯದ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಪರಿಸರವನ್ನು ನಿರಂತರವಾಗಿ ಕ್ರೀಯಾಶೀಲ ಗೊಳಿಸುವಲ್ಲಿ ಹಾಗೂ ಸಮಾಜದ ಹಿತವನ್ನು ಕಾಪಾಡುವಲ್ಲಿ ಲಿಂಗೈಕ್ಯ ಡಾ. ಅಭಿನವ ಅನ್ನದಾನ ಸ್ವಾಮಿಗಳ ಕೊಡುಗೆ ಅಪಾರ ಎಂದು ಖೇಳಗಿ ಶಿವಲಿಂಗೇಶ್ವರ ಮಠದ ಶಿವಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದ ಅನ್ನದಾನ ಶಿವಯೋಗಿಗಳ 109ನೇ ಪುಣ್ಯಸ್ಮರಣೋತ್ಸವ ಹಾಗೂ ಶ್ರೀಮಠದ 171ನೇ ರಥೋತ್ಸವದ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಅಭಿನವ ಅನ್ನದಾನ ಸ್ವಾಮಿಗಳಿಗೆ ಬಡವರ ಬಗ್ಗೆ ಹಾಗೂ ಭಕ್ತರ ಬಗ್ಗೆ ತುಂಬಾ ಕಾಳಜಿ ಇತ್ತು. ಅದಕ್ಕಾಗಿಯೇ ಮಠಕ್ಕೆ ಬಂದ ಭಕ್ತರಿಗೆಲ್ಲ ಮೊದಲು ಪ್ರಸಾದ ಮಾಡಲು ಹೇಳುತ್ತಿದ್ದರು. ಅವರು ನಡೆದಾಡಿದ ಈ ನೆಲ ಪುಣ್ಯ ಕ್ಷೇತ್ರವಾಗಿದೆ ಎಂದರು.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಾಲಕೆರೆ ಅನ್ನದಾನೇಶ್ವರ ಮಠವು ಸಮಾಜದ ಏಳ್ಗೆಗೆ ಶ್ರಮಿಸುತ್ತಿದೆ. ಇಲ್ಲಿಎಲ್ಲಾ ಧರ್ಮಿಯರು ಪರಸ್ಪರ ಪ್ರೀತಿ ವಿಶ್ವಾಸದಿಂದ ಅನ್ಯೋನ್ಯವಾಗಿ ಯಾವ ಮತೀಯ ಗಲಭೆಗಳಿಲ್ಲದೆ ಬದುಕುವುದಕ್ಕೆ ಪ್ರೇರಣೆಯಾಗಿದೆ. ಅಲ್ಲದೆ ನಾಡಿನ ವಿಶಿಷ್ಟ ಪರಂಪರೆಯನ್ನು ಮುನ್ನಡೆಯಿಸಿಕೊಂಡು ಬರುತ್ತಿರುವ ಕನ್ನಡ ನಾಡಿನ ದೊಡ್ಡ ಆಸ್ತಿಯಾಗಿದೆ ಎಂದರು.
ಹಾಲಕೆರೆ ಶ್ರೀಮಠದ ಪೀಠಾಧಿಪತಿ ಮುಪ್ಪಿನಬಸಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಮತ್ತು ಕುಮಾರ ಶಿವಯೋಗಿಗಳು ನಡೆದುಬಂದ ದಾರಿಯಲ್ಲಿಯೇ ಅಭಿನವ ಅನ್ನದಾ ಶ್ರೀಗಳು ನಡೆದಿದ್ದಾರೆ. ಭಕ್ತರ ಏಳಿಗೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಶ್ರೀಗಳು ಸಾವಯವ ಕೃಷಿ, ನೆಲ, ಜಲ, ಮಣ್ಣಿನ ಸಂರಕ್ಷಣೆ ಬಗ್ಗೆ ಮಠಕ್ಕೆ ಬರುವ ಭಕ್ತರಿಗೆ ತಿಳುವಳಿಕೆ ನೀಡುತ್ತಿದ್ದರು. ಅಂತಹ ಗುರುಗಳನ್ನು ಪಡೆದ ನಾವೇ ಪುಣ್ಯವಂತರು ಎಂದು ಹೇಳಿದರು.
ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಶಿದ್ದೇಶ್ವರ ಶಿವಾಚಾರ್ಯರು, ದರೂರ ಕೊಟ್ಟೂರು ದೇಶಿಕರು, ಕುರಗೋಡ ಪರ್ವತ ದೇವರು, ಸೋಮಸಮುದ್ರ ನಾಗನಾಥ ದೇವರು, ಶ್ರೀಧರ ಗಡ್ಡೆ ಮರಿಕೊಟ್ಟೂರು ದೇವರು, ಗದುಗಿನ ಚಂದ್ರಶೇಖರ ದೇವರು, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಚೆನ್ನಬಸವ ಸ್ವಾಮೀಜಿ, ಇಟಗಿಯ ಷಣ್ಮುಖಪ್ಪಜ್ಜ ಧರ್ಮರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.