ಗದಗ: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ (ಕೆಎಸ್ಎಫ್ಸಿ) ಉದ್ಯಮಿಯೊಬ್ಬರು ಪಡೆದುಕೊಂಡ ಸಾಲಕ್ಕೆ, ಸಬ್ಸಿಡಿ ಬಿಡುಗಡೆ ಮಾಡಲು ₹1.20 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಇಲ್ಲಿನ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ದತ್ತಾತ್ರೇಯ ಸತ್ಯಪ್ಪ ಶಿರೋಳ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಗದುಗಿನ ನಂದೀಶ್ವರ ನಗರದ ನಿವಾಸಿ ಪ್ರಶಾಂತ ಮುರಿಗೆಪ್ಪ ಲಿಂಗದಾಳ ಎಂಬುವವರು ತಮ್ಮ ಒಡೆತನದ ಶಿವಸಂಗಮ ಫುಡ್ಸ್ ಆ್ಯಂಡ್ ಬೆವರೇಜಸ್ ಉದ್ಯಮ ಘಟಕಕ್ಕಾಗಿ ಕೆಎಸ್ಎಫ್ಸಿಯಿಂದ ₹1.90 ಕೋಟಿ ಸಾಲ ಪಡೆದಿದ್ದರು. ಈ ಸಾಲಕ್ಕೆ ₹20 ಲಕ್ಷ ಸಬ್ಸಿಡಿ ನೆರವು ಲಭಿಸಿತ್ತು.‘ಈ ಸಬ್ಸಿಡಿ ಬಿಡುಗಡೆ ಮಾಡಲು ದತ್ತಾತ್ರೇಯ ಅವರು ಲಂಚದ ಬೇಡಿಕೆ ಇರಿಸಿದ್ದರು. ಶುಕ್ರವಾರ ತಮ್ಮ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದಾಗ ಅವರನ್ನು ಬಂಧಿಸಲಾಯಿತು’ಎಂದು ಎಸಿಬಿ, ಡಿಎಸ್ಪಿ ವಾಸುದೇವ ರಾಮ ಎನ್. ತಿಳಿಸಿದರು.
ದಾಳಿಯಲ್ಲಿ ಸಿಪಿಐ ಆನಂದ ಒಣಕುದರಿ, ಎಂ.ಎಸ್.ತಾನಪ್ಪಗೋಳ, ಎಂ.ಎಂ.ಅಯ್ಯನಗೌಡರ, ಆರ್.ಎಚ್.ಹೆಬಸೂರ, ಎಸ್.ಟಿ.ಅಣ್ಣಿಗೇರಿ, ಎಂ.ಎನ್.ಕರಿಗಾರ, ಎನ್.ಎಸ್.ತಾಯಣ್ಣವರ, ಐ.ಸಿ.ಜಾಲಿಹಾಳ, ವೀರೇಶ ಜೋಳದ, ತಾರಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.