ADVERTISEMENT

ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 14:08 IST
Last Updated 9 ಮಾರ್ಚ್ 2020, 14:08 IST
ಅಪಘಾತದ ತೀವ್ರತೆಗೆ ಸಂಪೂರ್ಣ ಜಖಂಗೊಂಡ ಕಾರು
ಅಪಘಾತದ ತೀವ್ರತೆಗೆ ಸಂಪೂರ್ಣ ಜಖಂಗೊಂಡ ಕಾರು   

ಗದಗ: ಕಾರು ಪಲ್ಟಿಯಾಗಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿರುವ ಬೂದಿ ಬಸವೇಶ್ವರ ದೇವಸ್ಥಾನದ ಬಳಿ ಸೋಮವಾರ ನಡೆದಿದೆ.

ಬಿಜೆಪಿಯ ಕೊಪ್ಪಳ ನಗರ ಘಟಕದ ಮಾಜಿ ಅಧ್ಯಕ್ಷ ಹಾಗೂ ವಿಶ್ವ ಹಿಂದು ಪರಿಷತ್‌ನ ಕೊಪ್ಪಳ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಹಕ್ಕಾಪಕ್ಕಿ ಅವರ ಅತ್ತೆ, ಹೆಂಡತಿ ಹಾಗೂ ಮಗು ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಪ್ರಮೀಳಾ ಮಸ್ಕಿ (70), ಯಶೋಧಾ ಹಕ್ಕಾಪಕ್ಕಿ (45) ಮತ್ತು ಒಂದೂವರೆ ವರ್ಷದ ಗಂಡು ಮಗು ಆರ್ಯ ಮೃತಪಟ್ಟವರು.

ADVERTISEMENT

ಮದುವೆಯಾಗಿ ಬಹಳ ವರ್ಷಗಳ ತನಕ ಹಕ್ಕಾಪಕ್ಕಿ ದಂಪತಿಗೆ ಮಕ್ಕಳು ಆಗಿರಲಿಲ್ಲ. ಹೀಗಾಗಿ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ರಾಮಲಿಂಗ ಹೋಳಿ ಕಾಮಣ್ಣನಿಗೆ ಹರಕೆ ಕಟ್ಟಿಕೊಂಡಿದ್ದರು. ನಂತರ ಅವಳಿ ಮಕ್ಕಳು ಜನಿಸಿದ್ದರು. ಒಂದು ವರ್ಷದ ನಂತರ ಈ ಹರಕೆ ತೀರಿಸಲು ಸೋಮವಾರ ನವಲಗುಂದಕ್ಕೆ ಹೋಗಿದ್ದರು. ಅಲ್ಲಿ ಹರಕೆ ತೀರಿಸಿ, ಮರಳಿ ಕೊಪ್ಪಳಕ್ಕೆ ವಾಪಾಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಅವಳಿ ಮಕ್ಕಳಲ್ಲಿ ಗಂಡು ಮಗು ಆರ್ಯ ಮೃತಪಟ್ಟಿದ್ದು, ಹೆಣ್ಣು ಮಗು ಆದ್ಯಾ ಅಪಾಯದಿಂದ ಪಾರಾಗಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಹಕ್ಕಾಪಕ್ಕಿ ಅವರ ಮಾವನವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಮೃತರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.