ಗಜೇಂದ್ರಗಡ: ‘ಅಧಿಕಾರಶಾಹಿಯಲ್ಲಿನ ಭ್ರಷ್ಟಾಚಾರ ಮತ್ತು ಕೃಷಿ ಕ್ಷೇತ್ರಕ್ಕೆ ಹೂಡಿಕೆ ಮಾಡುವುದು ತಿದ್ದುಪಡಿಗೆ ಕಾರಣವಾಗಿದ್ದು, ಕೃಷಿ ಸಮುದಾಯವನ್ನು ದುರ್ಬಲಗೊಳಿಸುವ ಹುನ್ನಾರ ಅಡಗಿದೆ’ ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಯು.ಬಸವರಾಜ ಹೇಳಿದರು.
ಇಲ್ಲಿನ ಸಿಪಿಎಂ ಕಚೇರಿಯಲ್ಲಿ ಸೋಮವಾರ ನಡೆದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಕೃಷಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿಯಾಗಿ ಸರ್ಕಾರ ತೆಗೆದುಕೊಂಡ ನಿರ್ಧಾರ ಏಕಪಕ್ಷೀಯವಾಗಿದೆ. ಅಲ್ಲದೇ ಅದನ್ನು ಸುಗ್ರಿವಾಜ್ಞೆಯ ಮೂಲಕ ಜಾರಿಗೆ ತರಲು ಹೊರಟಿರುವುದರ ಹಿಂದೆ ಬಂಡವಾಳಶಾಹಿಗಳ ಹಿತ ಅಡಗಿದೆ. ಇದರಿಂದ ರೈತರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ರೈತ ಪರ ಎನ್ನುವ ಸರ್ಕಾರ ಇದೀಗ ಈ ತಿದ್ದುಪಡಿಯನ್ನು ಜಾರಿಗೆ ತರುವ ಮೂಲಕ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ' ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಾಲು ರಾಠೋಡ ಮಾತನಾಡಿದರು. ಇದೇ ವೇಳೆ ನ.26 ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ಕೊಡಲಾಯಿತು. ರೋಣ ಹಾಗೂ ಗಜೇಂದ್ರಗಡ ಭಾಗದ ಸಂಚಾಲನ ಸಮಿತಿ ರಚಿಸಲಾಯಿತು.
ಪೀರು ರಾಠೋಡ, ಎಂ.ಎಸ್.ಹಡಪದ, ಮಾರುತಿ ಚಿಟಗಿ, ಶಿವಾನಂದ ಬ್ಲೋಸೆ, ಚಂದ್ರು ರಾಠೋಡ, ಹನಮಂತ ತಾಳಿ, ಶಾಂತಣ್ಣ ಸಜ್ಜನ, ಕನಕಪ್ಪಮಡಿವಾಳ, ಮಾದೇಗೌಡ ಪಾಟೀಲ್, ಮೇಘರಾಜ ಬಾವಿ ಕರಿಯಮ್ಮ ಗುರಿಕಾರ, ಕನಕಮ್ಮ ಮಾದರ, ಅಮರಯ್ಯ ಭೂಸನೂರ ಮಠ, ಯಮನೂರಪ್ಪ ಹುಲ್ಲಣ್ಣನವರ, ಗಿರೀಜಾ ರಾಠೋಡ, ರವೀಂದ್ರ ಹೊನವಾಡ, ಮೈಬು ಹವಾಲ್ದಾರ್, ಚೆನ್ನಪ್ಪ ಗುಗಲೋತ್ತರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.