ಗದಗ (ಲಕ್ಕುಂಡಿ): ಎರಡು ವರ್ಷಗಳಿಂದ ಕೋವಿಡ್–19 ಕಾರಣದಿಂದ ಜನಜೀವನ ಅಸ್ತವ್ಯಸ್ತಗೊಂಡು ಮಕ್ಕಳು ಶಿಕ್ಷಣ ಪಡೆಯುವಲ್ಲಿ ಹಿಂದುಳಿದಿದ್ದಾರೆ. ಈ ದಿಸೆಯಲ್ಲಿ ಸರ್ಕಾರ ಮತ್ತು ಶಿಕ್ಷಕರ ಜೊತೆ ಪಾಲಕರು ಕೈ ಜೋಡಿಸಿ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಇಲ್ಲಿಗೆ ಸಮೀಪದ ಹರ್ಲಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20ನೇ ಸಾಲಿನ ನಬಾರ್ಡ್ ಆರ್ಐಡಿಎಫ್ 25ರ ಅನುದಾದಡಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣವಾಗಿರುವ ಶಾಲಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್–19 ನಿಯಂತ್ರಣಕ್ಕಾಗಿ ಸರ್ಕಾರ ಅನಿವಾರ್ಯವಾಗಿ ಲಾಕ್ಡೌನ್ ಘೋಷಣೆ ಮಾಡಬೇಕಾಯಿತು. ಇದು ಉದ್ಯಮಗಳು, ಕಾರ್ಖಾನೆಗಳು, ಶಿಕ್ಷಣ ವಲಯ, ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಕೆಲವು ದಿನಗಳಿಂದ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ಆರ್ಥಿಕತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ’ ಎಂದು ಹೇಳಿದರು.
‘ಪಾಲಕರು ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಿ, ರೋಗನಿರೋಧಕ ಹೆಚ್ಚಿಸುವ ಆಹಾರ ನೀಡಬೇಕು. ಕೊರೊನಾ ರೋಗಕ್ಕೆ ಹೆದರದೇ ಜಾಗೃತಿ ವಹಿಸಬೇಕು. ಶಾಲೆ ನಮ್ಮೆಲ್ಲರ ಆಸ್ತಿಯಾಗಿದ್ದು, ಇದರ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಕೊಟ್ಟೂರೇಶ್ವರ ಸ್ವಾಮೀಜಿ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮ ಪಂಚಾಯ್ತಿಗೆ ಆಯ್ಕೆಯಾಗಿರುವ ನೂತನ ಅಧ್ಯಕ್ಷರು ಯುವಕರಿದ್ದು ಎಲ್ಲ ಸದಸ್ಯರು ಕ್ರೀಯಾಶೀಲ ವ್ಯಕ್ತಿಗಳಾಗಿದ್ದಾರೆ. ಆದ್ದರಿಂದ ಈ ಕ್ಷೇತ್ರದ ಶಾಸಕರ ಮಾರ್ಗದರ್ಶನ ಹಾಗೂ ಗ್ರಾಮದ ಹಿರಿಯರ ಸಹಕಾರದೊಂದಿಗೆ ಹರ್ಲಾಪೂರವನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೋಮನಗೌಡ ಕೆಂಚನಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲಕ್ಷ್ಮವ್ವ ವಡ್ವರ, ಸದಸ್ಯರಾದ ಫಕ್ಕೀರಪ್ಪ ಹುಯಿಲಗೋಳ, ಸಿದ್ದಲಿಂಗೇಶ ಯಾಳವಾಡ, ಅಕ್ಕಮ್ಮ ಕೋಗಿಲೆ, ರೇಣುಕಾ ವಡ್ಡರ, ಸುಮಂಗಲಾ ಚಟ್ರಿ, ನಿರ್ಮಲಾ ಕೊತಪ್ಪನವರ ಹಾಗೂ ಆನಂದ ಹಂಚಿನಾಳ, ಅಶೋಕ ಗದಗಿನ, ಶಿವಾನಂದಪ್ಪ ಯಾಳವಾಡ, ಭರಮಪ್ಪ ಕಿಡಿಯಪ್ಪನವರ, ಬಸವರಾಜ ಗೊರವರ, ಮಹೇಶ ಕುಂಬಾರ, ಮಹಾದೇವಪ್ಪ ಯಾಳವಾಡ, ದಾವಲಸಾಬ ನವಲಗುಂದ, ಶಶಿಧರ ಧರ್ಮಾಯತ, ಜಡೀಶ ಮಡಿವಾಳರ, ಸಂತೋಷ ವಡ್ಡರ, ಸಿದ್ದಣ್ಣ ಕದಾಂಪೂರ, ಈರಪ್ಪ ವಡ್ಡರ, ಬಸವರಾಜ ಮರಡಿ, ಶರಣಪ್ಪ ದೇಸಾಯಿ, ಬಿಇಒ. ಎಂ.ಎ.ರೆಡ್ಡೇರ, ಮುಖ್ಯೋಪಾಧ್ಯಯ ಉದಯಕುಮಾರ ಇಟಗಿಮಠ, ಪಿಡಿಒ ಮಂಜುಳಾ ಬಾರಕೇರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.