ADVERTISEMENT

ಲಿಂಗಾಯತ ಧರ್ಮದ ಬೆಳಕು ಅಕ್ಕ ಅನ್ನಪೂರ್ಣ

ಬಸವದಳದ 1,647ನೇ ಶರಣ ಸಂಗಮ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 16:29 IST
Last Updated 8 ಜೂನ್ 2025, 16:29 IST
ಗದಗ ನಗರದ ಬಸವದಳ ಕೇಂದ್ರದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಚಿನ್ಮಯಿ ಕರೇಗೌಡ್ರ ಅವರನ್ನು ಸನ್ಮಾನಿಸಲಾಯಿತು
ಗದಗ ನಗರದ ಬಸವದಳ ಕೇಂದ್ರದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಚಿನ್ಮಯಿ ಕರೇಗೌಡ್ರ ಅವರನ್ನು ಸನ್ಮಾನಿಸಲಾಯಿತು   

ಗದಗ: ‘12ನೇ ಶತಮಾನದಲ್ಲಿ ಬಸವಾದಿ ಶರಣರಿಂದ ರೂಪುಗೊಂಡ ಲಿಂಗಾಯತ ಧರ್ಮಕ್ಕೆ ಅಂದಿನಿಂದ ಇಂದಿನವರೆಗೂ ಅನೇಕ ಶರಣರು ತಮ್ಮದೇ ಆದ ಸೇವೆ ಮೂಲಕ ಧರ್ಮ ಜ್ಞಾನ ನೀಡಿ, ಈ ಜಗತ್ತು ಬೆಳಗುವಂತೆ ಮಾಡಿದ್ದಾರೆ. ಅಂತವರಲ್ಲಿ ಅಕ್ಕ ಅನ್ನಪೂರ್ಣ ತಾಯಿಯವರು ಕೂಡ ಒಬ್ಬರು’ ಎಂದು ಶರಣೆ ಗೌರಕ್ಕ ಬಡಿಗಣ್ಣವರ ಹೇಳಿದರು.

ನಗರದ ಬಸವದಳದ ವತಿಯಿಂದ ನಡೆದ 1,647ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಬಸವತತ್ವ ಪ್ರಸಾರದಲ್ಲಿ ಅಕ್ಕ ಅನ್ನಪೂರ್ಣ ತಾಯಿ ಒಂದು ನೆನಪು’ ವಿಷಯ ಕುರಿತು ಉಪನ್ಯಾಸ ನೀಡಿದರು.

‘ಅಕ್ಕ ಅನ್ನಪೂರ್ಣ ಅವರು ಬೀದರ್‌ನಲ್ಲಿ ಶರಣ ಉದ್ಯಾನ, ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾಮಠ, ನೀಲಮ್ಮನ ಬಳಗ, ಲಿಂಗಾಯತ ಸೇವಾದಳ ಮುಂತಾದ ಸಂಘಟನೆಗಳ ಮೂಲಕ ಬಸವತತ್ವ ಪಸರಿಸಿದರು. ಪ್ರತಿವರ್ಷ ವಚನ ವಿಜಯೋತ್ಸವ, ಕಲ್ಯಾಣ ಕ್ರಾಂತಿಯ ವಿಜಯೋತ್ಸವ ಆಯೋಜಿಸಿ ರಾಜ್ಯದ ತುಂಬ ಮನೆ ಮಾತಾದರು. ಹೀಗೆ ಲಿಂಗಾಯತ ಧರ್ಮಕ್ಕೆ ಅವರು ಅಪಾರ ಸೇವೆ ಸಲ್ಲಿಸುತ್ತಿದ್ದರು. ಅವರ ಅಗಲಿಕೆ ಬಸವ ತತ್ವ ಪ್ರಸಾರಕ್ಕೊಂದು ದೊಡ್ಡ ಪೆಟ್ಟು, ಬಸವ ಅನುಯಾಯಿಗಳಿಗೆ ನೋವನ್ನುಂಟು ಮಾಡಿದೆ’ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಶರಣ ವಿ.ಕೆ. ಕರೇಗೌಡ್ರ ಮಾತನಾಡಿದರು. ಶರಣ ಕಳಕಪ್ಪ ವ್ಯಾಪಾರಿ, ಶರಣ ಮಾಲತೇಶ ವಿ. ಕರೇಗೌಡ್ರ ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಸಿಬಿಎಸ್‍ಇ 10ನೇ ತರಗತಿಯಲ್ಲಿ ಶೇ.85 ಅಂಕ ಪಡೆದು ಪಾಸಾದ ಚಿನ್ಮಯಿ ಕರೇಗೌಡ್ರ ಅವರನ್ನು ಸನ್ಮಾನಿಸಲಾಯಿತು.

ಶರಣೆ ವಿಜಯಲಕ್ಷ್ಮೀ ಗೌಡಪ್ಪಗೌಡ ಪಾಟೀಲ ಹಾಗೂ ಶರಣೆ ರತ್ನಕ್ಕ ಎಂ. ಅಂಗಡಿ ಬಸವದಳದ ಕಟ್ಟಡಕ್ಕೆ ಧನಸಹಾಯ ನೀಡಿದರು.

ಶರಣೆ ಗಂಗಮ್ಮ ಹೂಗಾರ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಮೃತ್ಯುಂಜಯ ಜಿನಗಾ ಸ್ವಾಗತಿಸಿದರು. ರಾಮಣ್ಣ ಕಳ್ಳಿಮನಿ ನಿರೂಪಣೆ ಮಾಡಿದರು. ಪ್ರಕಾಶ ಅಸುಂಡಿ ಕಾರ್ಯಕ್ರಮ ನಿರ್ವಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.