ನರಗುಂದ: ‘ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಆಡಳಿತದಿಂದಾಗಿ ದೇಶಿಯ ಉತ್ಪಾದನೆ ಹೆಚ್ಚಳವಾಗಿ ರಫ್ತು ಚಟುವಟಿಕೆಗಳು ವಿಕಸನಗೊಂಡಿವೆ. ಕೃಷಿ ಉತ್ಪಾದನೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಸಾಧ್ಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಮೃತ ಭಾರತ ಹಾಗೂ 325 ನೇ ಮಾಸಿಕ ಶಿವಾನುಭವ ಸಮಾರಂಭವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು.
‘ಭೈರನಹಟ್ಟಿ ಶ್ರೀ ಮಠ ಕೇವಲ ಪೂಜೆ-ಪುನಸ್ಕಾರಗಳಿಗೆ ಸೀಮಿತವಾಗಿರದೆ ಸಾಮಾಜಿಕ ಜಾಗೃತಿಯನ್ನು ಮೂಡಿಸುವಂತಹ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಈ ನಾಡಿನಲ್ಲೆ ತನ್ನದೆಯಾದ ಸಾಮಾಜಿಕ ಸೇವೆಯನ್ನು ಮಾಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟ ಕ್ರಮ ಕೈಗೊಂಡಿದೆ. ಸುರಕ್ಷತಾ ಕ್ರಮಗಳನ್ನು ಪಾಲಿಸುವಲ್ಲಿ ಸಾರ್ವಜನಿಕರು ನಿರ್ಲಕ್ಷ್ಯ ತೋರಿದರೆ ಮುಂದೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಸಚಿವರು ಎಚ್ಚರಿಕೆ ನೀಡಿದರು.
ಬಿಜೆಪಿ ರಾಜ್ಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ.ಪ್ರಕಾಶ ಬಾಳಿಕಾಯಿ ಉಪನ್ಯಾಸ ನೀಡಿ ‘ವಿವಿಧತೆಯಲ್ಲಿ ಏಕತೆಯನ್ನು ಕಂಡಂತಹ ಶ್ರೇಷ್ಠ ಭಾರತ’ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಆರ್.ಯಾವಗಲ್, ಪಾರಂಪರಿಕ ವೈದ್ಯ ಡಾ.ಹನಮಂತ ಮಳಲಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮವ್ವ ಕಟ್ಟಿಮನಿ, ಉಪಾಧ್ಯಕ್ಷ ನಾಗಪ್ಪ ಬೆನ್ನೂರ, ಸದಸ್ಯರಾದ ಪ್ರಕಾಶ ನರಸಾಪೂರ, ಬಸನಗೌಡ ಪಾಟೀಲ, ಜ್ಞಾನದೇವ ಮನೇನಕೊಪ್ಪ, ಬಿ.ಬಿ.ಐನಾಪೂರ, ಚಂದ್ರು ದಂಡಿನ, ಈರಪ್ಪ ಐನಾಪೂರ, ರಂಗಪ್ಪ ತೆಗ್ಗಿನಮನಿ, ಗುರುಶಾಂತ ನರಸಾಪೂರ ಇದ್ದರು.
ಆರ್.ಬಿ.ಚಿನಿವಾಲರ ನಿರೂಪಿಸಿದರು.ಮಹಾಂತೇಶ ಹಿರೇಮಠ ವಂದಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.